ಫರಿದ್ಕೋಟ್: ವಿರೋಧ ಪಕ್ಷದ ನಾಯಕರಿಗೆ ಸುಳ್ಳು ಹೇಳುವುದೇ ಚಾಳಿ. ಸರ್ಕಾರದ ಪ್ರತಿಯೊಂದು ಉಪಕ್ರಮದಲ್ಲೂ ತಪ್ಪು ಹುಡುಕುತ್ತಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಶನಿವಾರ ಆರೋಪಿಸಿದ್ದಾರೆ.
ಟೀಕೆ ಮಾಡಬೇಕೆಂಬ ಏಕ ಕಾರಣಕ್ಕಾಗಿ ಸರ್ಕಾರವನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ ಎಂದು ಅವರು ದೂರಿದರು.
ಹಾಗಿದ್ದರೂ ಸರ್ಕಾರವು ಜನಪರ ಕಾರ್ಯಗಳನ್ನು ಮುಂದುವರಿಸಲಿದ್ದು, ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲಿದೆ. ರಾಜ್ಯವನ್ನು ಭ್ರಷ್ಟಾಚಾರ, ಡ್ರಗ್ಸ್, ನಿರುದ್ಯೋಗ ಮುಕ್ತಗೊಳಿಸಲಿದ್ದೇವೆ ಎಂದು ಭರವಸೆ ನೀಡಿದರು.
ಹಿಂದಿನ ಸರ್ಕಾರಗಳು ಹಣವನ್ನು ದುರುಪಯೋಗ ಮಾಡಿವೆ. ಆದರೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಒದಗಿಸುತ್ತಿರುವ ಆಮ್ ಆದ್ಮಿ ಪಕ್ಷವು ಸಾರ್ವಜನಿಕ ನಿಧಿಯನ್ನು ಜನರ ಒಳಿತಿಗಾಗಿಯೇ ಬಳಕೆ ಮಾಡುತ್ತಿದೆ ಎಂದು ಹೇಳಿದರು.