ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದ ಯುವಕರು ಕಾಶ್ಮೀರದಲ್ಲೂ ಜಮೀನು ಖರೀದಿಸಬಹುದು: ಯೋಗಿ ಆದಿತ್ಯನಾಥ

ಮೋದಿ-ಶಾ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕಿದ್ದಾರೆ ಎಂದ ಉತ್ತರ ಪ್ರದೇಶ ಮುಖ್ಯಮಂತ್ರಿ
Last Updated 4 ಏಪ್ರಿಲ್ 2021, 15:01 IST
ಅಕ್ಷರ ಗಾತ್ರ

ಅಮ್ಟಾ (ಪಶ್ಚಿಮ ಬಂಗಾಳ):ಸಂವಿಧಾನದ 370ನೇ ವಿಧಿಯನ್ವಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕಿದ್ದಾರೆ. ಇದೀಗ ಬಂಗಾಳದ ಯುವಕರು ಅಲ್ಲಿಯೂ ಜಮೀನು ಖರೀದಿಸಬಹುದಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, 'ಡಾ. ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ತ್ಯಾಗವ್ಯರ್ಥವಾಗಲಿಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಸಂವಿಧಾನದ370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತುಹಾಕಿದ್ದಾರೆ. ಇದೀಗ ಬಂಗಾಳದ ಯುವಕರು ಜಮ್ಮು-ಕಾಶ್ಮೀರದಲ್ಲಿಯೂ ಭೂಮಿ, ಮನೆಯನ್ನು ಖರೀದಿಸಬಹುದಾಗಿದೆ. ಕೇಂದ್ರಾಡಳಿತ ಪ್ರದೇಶದ ಜನರಂತೆಯೇ ಹಕ್ಕುಗಳನ್ನು ಹೊಂದಿರುತ್ತಾರೆ' ಎಂದಿದ್ದಾರೆ.

ಮುಂದುವರಿದು,ʼ2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬಂಗಾಳಕ್ಕೆ ಬಂದಿದ್ದಾಗ, ಜನರು ರಾಮ ಮಂದಿರ ನಿರ್ಮಾಣ ಮಾಡುವುದು ಯಾವಾಗ? ಎಂದು ಕೇಳುತ್ತಿದ್ದರು. ಆ ಕೆಲಸ ಆಗುತ್ತದೆ.ಜನರು ಕಾಯಬೇಕು ಎಂದು ಹೇಳಿದ್ದೆ. 2020ರ ಆಗಸ್ಟ್‌5ರಂದು ಪ್ರಧಾನಿ ಮೋದಿ ಅವರು ರಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಾವು ಏನನ್ನು ಹೇಳುತ್ತೇವೆಯೋ, ಅದು ಆಗುವಂತೆ ಮಾಡುತ್ತೇವೆʼ ಎಂದು ಹೇಳಿದ್ದಾರೆ.

ಮೇ 2ರಂದು ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ, ʼಸುವರ್ಣ ಬಂಗಾಳʼದ ಕನಸೂ ಕೂಡ ನನಸಾಗಲಿದೆಎಂದೂ ಭರವಸೆ ನೀಡಿದ್ದಾರೆ.

ಬಂಗಾಳದಲ್ಲಿ ಮೂರನೇ ಹಂತದ ಮತದಾನ ಏಪ್ರಿಲ್‌6 ರಂದು ನಡೆಯಲಿದೆ.

1951ರಲ್ಲಿ ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ಸ್ಥಾಪಿಸಿದ್ದ ಭಾರತೀಯ ಜನ ಸಂಘವನ್ನು 1977ರಲ್ಲಿ ನಿರ್ಬಂಧಿಸಲಾಗಿತ್ತು. ಬಳಿಕ ಮುಖರ್ಜಿ ಅವರ ಹಿಂಬಾಲಕರು 1980ರಲ್ಲಿ ಬಿಜೆಪಿಯನ್ನು ಕಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT