ರಾಜ್ಯಸಭೆಯಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ಮೋದಿ: ಕಾಂಗ್ರೆಸ್ ಟೀಕೆ

ನವದೆಹಲಿ: ರಾಜ್ಯಸಭೆಯಲ್ಲಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುಟುಂಬ ರಾಜಕಾರಣದಿಂದ ದೇಶಕ್ಕೆ ದೊಡ್ಡ ಅಪಾಯ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗೌರವ್ ಗೊಗೊಯಿ ಹಾಗೂ ಶಕ್ತಿ ಸಿಂಗ್ ಗೋಹಿಲ್ ಪತ್ರಿಕಾಗೋಷ್ಠಿ ನಡೆಸಿ, ಪ್ರಧಾನಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳು ಎತ್ತಿರುವ ವಿಷಯಗಳಿಗೆ ಪ್ರಧಾನಿ ಉತ್ತರವನ್ನೇ ನೀಡಿಲ್ಲ. ಬದಲಿಗೆ ಚುನಾವಣಾ ಭಾಷಣ ಮಾಡಿದ್ದಾರೆ ಎಂದು ದೂರಿದ್ದಾರೆ.
‘ಎರಡು ಕೋಟಿ ಉದ್ಯೋಗ ಎಲ್ಲಿದೆ? ಈ ಕುರಿತು ನೀವು ಯಾಕೆ ಮಾತನಾಡುವುದಿಲ್ಲ’ ಎಂದು ಗೌರವ್ ಗೊಗೊಯಿ ಪ್ರಶ್ನಿಸಿದ್ದಾರೆ. ಪ್ರಧಾನಿಯವರು ಪ್ರತಿಪಕ್ಷಗಳು ರಾಜ್ಯಸಭೆ ಕಲಾಪದಿಂದ ಹೊರನಡೆಯುವಂತೆ ಮಾಡಿದರು ಎಂದು ಜೈರಾಂ ರಮೇಶ್ ದೂರಿದ್ದಾರೆ.
ಪ್ರಧಾನಿಯವರು ‘ಕೈ’ ಪಕ್ಷ ಮತ್ತು ಅದರ ಕುಟುಂಬ ರಾಜಕಾರಣವನ್ನು ಉಲ್ಲೇಖಿಸಿ ಟೀಕಿಸಿದ್ದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಗೋವಾದ ಸ್ವಾತಂತ್ರ್ಯ ವಿಳಂಬಕ್ಕೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕಾರಣ ಎಂದೂ ಮೋದಿ ಟೀಕಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಕ್ರಮಗಳನ್ನು ವಿಶ್ವವೇ ಮೆಚ್ಚಿದೆ: ಮೋದಿ
‘ಪ್ರಜಾಪ್ರಭುತ್ವ ಮತ್ತು ಚರ್ಚೆಗಳು ಶತಮಾನಗಳಿಂದ ಭಾರತದ ಅಂಗವಾಗಿವೆ. ಭಾರತ ಎಂಬುದು ಕಾಂಗ್ರೆಸ್ನ ಕೃಪೆಯಲ್ಲ. ಕುಟುಂಬ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ತಗುಲಬಹುದಾದ ಅತಿಕೆಟ್ಟ ಅಂಶ. ದೇಶದ ಮೇಲೆ ಒಂದು ಕುಟುಂಬ ಪ್ರಾಬಲ್ಯ ಸಾಧಿಸಿದಾಗ ದೊಡ್ಡ ಅಪಾಯವಿದೆ. ತನ್ನ ಹಿರಿಯರು ಮಾಡಿರುವ ತಪ್ಪುಗಳ ಆಧಾರದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಪಕ್ಷವು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ’ ಎಂದು ಮೋದಿ ಟೀಕಾ ಪ್ರಹಾರ ನಡೆಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.