ಮುಂಬೈ: ‘ಜನರಿಗೆ ಒತ್ತುವರಿದಾರರು ಎಂಬ ಹಣಪಟ್ಟಿ ನೀಡುವುದು ಮತ್ತು ಅವರನ್ನು ಸ್ಥಳಾಂತರಿಸುವುದು ಯಾವುದೇ ರೀತಿಯ ಪರಿಹಾರವಾಗುವುದಿಲ್ಲ. ಒತ್ತುವರಿ ಸಮಸ್ಯೆಯನ್ನು ಕೇವಲ ಬುಲ್ಡೋಜರ್ಗಳ ನಿಯೋಜನೆ ಮಾಡುವುದಕ್ಕಿಂತ ಹೆಚ್ಚಾಗಿ ವಿವೇಕದಿಂದ ಬಗೆಹರಿಸಬೇಕು’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಪಶ್ಚಿಮ ವಿಭಾಗೀಯ ರೈಲ್ವೆ ಮತ್ತು ಮುಂಬೈ ಸ್ಥಳೀಯ ಆಡಳಿತ ಮತ್ತು ಮುಂಬೈ ಮಹಾನಗರ ಪ್ರದೇಶಿಕ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್ಡಿಎ) ಉದ್ದೇಶಿಸಿ ಹೈಕೋರ್ಟ್ ಹೀಗೆ ಹೇಳಿದೆ.
ರೈಲ್ವೆಗೆ ಸೇರಿದ್ದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಆರೋಪಿಸಿ ರೈಲ್ವೆ ಪ್ರಾಧಿಕಾರವು ಮುಂಬೈನ ಏಕ್ತಾ ವೆಲ್ಫೇರ್ ಸೊಸೈಟಿಗೆ ಒಕ್ಕಲೆಬ್ಬಿಸುವ ಮತ್ತು ಸ್ಥಳಾಂತರಿಸುವ ನೋಟಿಸ್ ನೀಡಿದೆ. ಇದರ ವಿರುದ್ಧ ಏಕ್ತಾ ವೆಲ್ಫೇರ್ ಸೊಸೈಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಫೆಬ್ರುವರಿ 8ರಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ನಡೆಸಿತು.
ಒತ್ತುವರಿ ಮಾಡಲಾಗಿದೆ ಎನ್ನಲಾದ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸಲು ಯಾವುದಾದರೂ ಪುನರ್ವಸತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆಯೇ ಎಂದು ಪಶ್ಚಿಮ ವಿಭಾಗೀಯ ರೈಲ್ವೆ, ಎಂಎಂಆರ್ಡಿಎಯನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಪಶ್ಚಿಮ ವಿಭಾಗೀಯ ರೈಲ್ವೆ ಪ್ರಕಾರ, ಫೆಬ್ರುವರಿ 7ರ ವರೆಗೆ 101 ಅನಧಿಕೃತ ಕಟ್ಟಡಗಳನ್ನು ಈ ವರೆಗೆ ನೆಲಸಮ ಮಾಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, 2021ರ ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರೈಲ್ವೆ ಸೇರಿ ಇತರ ಸ್ಥಳೀಯ ಆಡಳಿತಗಳು ಪಾಲನೆ ಮಾಡಿಲ್ಲ. ಒಕ್ಕಲೆಬ್ಬಿಸುವ ಮತ್ತು ಕಟ್ಟಡಗಳನ್ನು ನೆಲಸಮ ಮಾಡುವ ಕೆಲಸಕ್ಕೆ ಚಾಲನೆ ನೀಡುವ ಮುನ್ನ ಸಂಬಂಧಪಟ್ಟ ಆಡಳಿತಗಳು ಆ ಕಟ್ಟಡಗಳಲ್ಲಿ ವಾಸಿಸುತ್ತಿರುವವರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಅವರ ಗುರುತಿನ ದಾಖಲಾತಿ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ರೈಲ್ವೆ ಪಾಲಿಸಿಲ್ಲ ಎಂದಿತು. ಜೊತೆಗೆ, ತೀರ್ಪಿಗೆ ವಿರುದ್ಧವಾಗಿ ಕಟ್ಟಡಗಳನ್ನು ರೈಲ್ವೆ ನೆಲಸಮಗೊಳಿಸುವಂತಿಲ್ಲ ಎಂದು ನಿರ್ದೇಶಿಸಿತು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 1ಕ್ಕೆ ನಿಗದಿಪಡಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.