ಸಂಗ್ರೂರ್: ಮಾದಕ ವ್ಯಸನದ ವಿರುದ್ಧದ ಹೋರಾಟಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಭಾನುವಾರ ಚಾಲನೆ ನೀಡಿದರು.
ತಮ್ಮ ಸ್ವಂತ ಜಿಲ್ಲೆಯಾದ ಸಂಗ್ರೂರ್ನಲ್ಲಿ 15,000ಕ್ಕೂ ಅಧಿಕ ಸೈಕ್ಲಿಸ್ಟ್ಗಳ ಜೊತೆಗೂಡಿ ಡ್ರಗ್ ಜಾಗೃತಿ ರ್ಯಾಲಿ ನಡೆಸಿದರು.
ರ್ಯಾಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ‘ಸಂಗ್ರೂರ್ ಕ್ರಾಂತಿಕಾರಿಗಳ ನಾಡು. ಇಂದು ಸಂಗ್ರೂರಿನ ಜನತೆ ಉದಾತ್ತ ಉದ್ದೇಶಕ್ಕಾಗಿ ಮತ್ತೊಮ್ಮೆ ಇಲ್ಲಿ ಸೇರಿದ್ದಾರೆ’ ಎಂದು ತಿಳಿಸಿದರು.
ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವ ಯುವಕರನ್ನು ಎಚ್ಚರಿಸುವುದು ಈ ರ್ಯಾಲಿಯ ಉದ್ದೇಶವಾಗಿದೆ ಎಂದು ಮಾನ್ ಹೇಳಿದರು.
ನಶೆಯ ಮೆದುಳನ್ನು ದೆವ್ವದ ಕಾರ್ಯಾಗಾರ ಎಂದು ಹೇಳಿರುವ ಅವರು, ‘ಹೆಚ್ಚಿನ ಉದ್ಯೋಗಾವಕಾಶಗಳು ಇದ್ದರೆ, ಸಮಾಜದಲ್ಲಿ ಮಾದಕ ದ್ರವ್ಯಗಳಿಗೆ ಜಾಗವೇ ಇರುವುದಿಲ್ಲ’ ಎಂದು ತಿಳಿಸಿದರು.
ಸಮಾಜದಿಂದ ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡಲು ತಮ್ಮ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಂದೂ ಮಾನ್ ಹೇಳಿದರು.