ರಾಂಚಿ: ಜಾರ್ಖಂಡ್ ವಿಧಾನಸಭೆಯ ನೂತನ ಕಟ್ಟಡದಲ್ಲಿ ನಮಾಜ್ ಮಾಡುವುದಕ್ಕಾಗಿ ಪ್ರತ್ಯೇಕ ಕೊಠಡಿ ಮೀಸಲಿಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆ, ಗದ್ದಲದಿಂದಾಗಿ ವಿಧಾನಸಭಾ ಕಲಾಪಕ್ಕೆ ಅಡ್ಡಿಯುಂಟಾಯಿತು.
ಸೋಮವಾರ ಅಧಿವೇಶನ ಆರಂಭಕ್ಕೆ ಮುನ್ನವೇ ಬಿಜೆಪಿ ಶಾಸಕರು ವಿಧಾನಸೌಧದ ಪ್ರವೇಶದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಹನುಮಾನ್ ಚಾಲೀಸ್ ಪಠಿಸುತ್ತಾ, ಹರೇ ರಾಮ ಎಂದು ಘೋಷಣೆಗಳನ್ನು ಕೂಗಿದರು.
ದಿನದ ಕಲಾಪ ಆರಂಭವಾದ ಕೂಡಲೇ ಬಿಜೆಪಿ ಸದಸ್ಯರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ ಪ್ರತಿಭಟಿಸಿದರು. ನಮಾಜ್ಗಾಗಿ ಪ್ರತ್ಯೇಕ ಕೊಠಡಿ ಮೀಸಲಿಡುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ವಿಧಾನ ಸಭಾಧ್ಯಕ್ಷ ರವೀಂದ್ರನಾಥ್ ಮಾತ್ಟೊ, ‘ನೀವೆಲ್ಲ ಒಳ್ಳೆಯ ಸದಸ್ಯರು. ದಯವಿಟ್ಟು ತಮ್ಮ ತಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳಿ. ಸದನ ನಡೆಯಲು ಸಹಕಾರ ನೀಡಿ‘ ಎಂದು ಪ್ರತಿಭಟನಾ ನಿರತ ಬಿಜೆಪಿ ಸದಸ್ಯರಿಗೆ ಸೂಚಿಸಿದರು. ಆದರೂ ಬಿಜೆಪಿ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸುವುದನ್ನು ಮುಂದುವರಿಸಿದರು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದ ಕಾರಣ ಸ್ಪೀಕರ್ ಅವರು ಕಲಾಪವನ್ನು ಮುಂದೂಡಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಭಾನುವಾರ ಜಾರ್ಖಂಡ್ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ, ವಿಧಾನಸಭಾ ಸ್ಪೀಕರ್ ಮತ್ತು ಮುಖ್ಯಮಂತ್ರಿಯವರ ಪ್ರತಿಕೃತಿ ದಹನ ಮಾಡಿದ್ದರು.
ಸ್ಪೀಕರ್ ರವೀಂದ್ರನಾಥ್ ಮಾತ್ಟೊ ಅವರು, ವಿಧಾನಸಭಾ ಕಟ್ಟಡದ 348 ಸಂಖ್ಯೆಯ ಕೊಠಡಿಯನ್ನು ನಮಾಜ್ ಮಾಡುವುದಕ್ಕಾಗಿ ಮೀಸಲಿಟ್ಟು ಆದೇಶ ಹೊರಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ವಿಧಾನಸಭೆಯ ಆವರಣದಲ್ಲಿ ಹನುಮಾನ್ ಮಂದಿರವನ್ನು ನಿರ್ಮಿಸಿ, ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.