ಲಖನೌ: ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಚುನಾವಣಾ ಸಮೀಕ್ಷೆಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹಾಗಾಗಿ, ಚುನಾವಣಾ ಸಮೀಕ್ಷೆಗಳ ಪ್ರಸಾರವನ್ನು ನಿಷೇಧಿಸಬೇಕು ಎಂದು ಸಮಾಜವಾದಿ ಪಕ್ಷವು (ಎಸ್ಪಿಇ) ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಫೆಬ್ರುವರಿ 10ರಂದು ನಡೆಯಲಿರುವ ಮೊದಲ ಹಂತದ ಮತದಾನದ ನಾಮಪತ್ರ ಪ್ರಕ್ರಿಯೆ ಮುಗಿದಿದೆ. ಹಾಗಿದ್ದರೂ ವಿವಿಧ ಸುದ್ದಿ ವಾಹಿನಿಗಳು ಜನಮತ ಸಮೀಕ್ಷೆಯನ್ನು ಪ್ರಸಾರ ಮಾಡುತ್ತಿವೆ ಎಂದು ಎಸ್ಪಿ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
‘ಜನಮತ ಸಮೀಕ್ಷೆಗಳು ಜನರ ಮನದಲ್ಲಿ ಗೊಂದಲ ಮೂಡಿಸುತ್ತಿವೆ. ಇವು ಚುನಾವಣಾ ಪ್ರಕ್ರಿಯೆಯನ್ನು ಬಾಧಿಸುತ್ತಿವೆ. ಹಾಗೆ ಮಾಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ’ ಎಂದು ನರೇಶ್ ಅವರು ಪತ್ರದಲ್ಲಿ ಹೇಳಿದ್ದಾರೆ.
ಜನಮತ ಸಮೀಕ್ಷೆಗಳ ಬಗ್ಗೆ ಇತರ ಪಕ್ಷಗಳು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಜನಮತ ಸಮೀಕ್ಷೆ ಪ್ರಸಾರದಲ್ಲಿ ತಪ್ಪೇನೂ ಇಲ್ಲ, ಅದು ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂಬುದು ಬಿಜೆಪಿಯ ಅಭಿಪ್ರಾಯವಾಗಿದೆ.