ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕು ಗೊಳಿಸಿರುವ ಸಿಬಿಐ, ನಟನ ಜೊತೆ ವಾಸವಿದ್ದ ಆತನ ಗೆಳೆಯ, ಅಡುಗೆ ಕೆಲಸದವ ಹಾಗೂ ಮನೆಗೆಲಸದ ಸಹಾಯಕನನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಮುಂಬೈನ ಸಾಂತಾಕ್ರೂಜ್ ಬಳಿಯಿರುವ ಡಿಆರ್ಡಿಒ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿಗೆ ಸುಶಾಂತ್ ಸ್ನೇಹಿತ ಸಿದ್ದಾರ್ಥ್ ಪಿಥಾನಿ,ಅಡುಗೆ ಕೆಲಸ ಮಾಡುತ್ತಿದ್ದ ನೀರಜ್ ಸಿಂಗ್ ಹಾಗೂ ಮನೆಗೆಲಸ ಮಾಡಿಕೊಂಡಿದ್ದ ದೀಪೇಶ್ ಸಾವಂತ್ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದರು.ಮೂವರಿಂದ ಶುಕ್ರವಾರವೂ ಹೆಳಿಕೆಗಳನ್ನು ಪಡೆಯಲಾಗಿತ್ತು.
ರಜಪೂತ್ ಅವರ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಚಾರ್ಟರ್ಡ್ ಅಕೌಂಟೆಂಟ್ಅವರಿಗೂ ಇನ್ನೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆಎನ್ನಲಾಗಿದೆ.
ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನಟನ ಹಣಕಾಸು ವ್ಯವಹಾರ ನಿರ್ವಹಿಸುತ್ತಿದ್ದ ಚಾರ್ಟರ್ಡ್ ಅಕೌಂಟೆಂಟ್ ಅವರನ್ನುಆಗಸ್ಟ್ 3 ರಂದು ವಿಚಾರಣೆಗೆ ಒಳಪಡಿಸಿದ್ದರು. ಅಗತ್ಯವಿದ್ದರೆ, ಮತ್ತೆ ತನಿಖೆಗೆ ಬರುವಂತೆ ಸೂಚಿಸುವುದಾಗಿ ನಿರ್ದೇಶನ ನೀಡಿದ್ದರು.
ನಟ ಸುಶಾಂತ್ ಜೂನ್ 14ರಂದು ಬಾಂದ್ರಾದಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದರು.ಜೂನ್ 25ರಂದು ಸುಶಾಂತ್ ತಂದೆ ಕೆ.ಕೆ ಸಿಂಗ್ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.