ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಒತ್ತಡ ತಂತ್ರ ಹೇರಲಾಗುತ್ತಿದ್ದು, ಮಹಾರಾಷ್ಟ್ರದ ವಿರುದ್ದ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ನಟನ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ತಪ್ಪು ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಭಾನುವಾರ ಪ್ರಕಟವಾದ ತಮ್ಮ ಅಂಕಣ ರೋಹ್ತೋಕ್ನಲ್ಲಿ ರಾವುತ್ ಬರೆದಿದ್ದಾರೆ.
ಪಟನಾ ಪೊಲೀಸರ ಎಫ್ಐಆರ್ ಆಧಾರದ ಮೇಲೆ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ನಮ್ಮ ದೇಶದಲ್ಲಿ ಯಾವುದೇ ಪ್ರಕರಣವನ್ನು ರಾಜಕೀಯ ವಿಷಯವಾಗಿ ಮಾಡಬಹುದು ಮತ್ತು ಒತ್ತಡ ತಂತ್ರವನ್ನು ಹೇರಬಹುದಾಗಿದೆ. ಸುಶಾಂತ್ ಸಿಂಗ್ ಪ್ರಕರಣದ ಸ್ಕ್ರಿಪ್ಟ್ ಈಗಾಗಲೇ ಬರದಂತಿದೆ.ತೆರೆಮರೆಯಲ್ಲಿ ಈಗ ಏನು ನಡೆಯುತ್ತಿದೆಯೋ ಅದು ಮಹಾರಾಷ್ಟ್ರ ವಿರುದ್ಧದ ಪಿತೂರಿ. ಪ್ರಕರಣವನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಕು ಎಂದು ನಿರ್ಧರಿಸಿದರೆ ಅದು ಯಾವ ಹಂತದವರೆಗೆ ಹೋಗುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಇದು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ನಡೆಯುತ್ತಿರುವುದು ದುರದೃಷ್ಟ ಎಂದಿದ್ದಾರೆ ರಾವುತ್.
ಈ ಪ್ರಕರಣದಲ್ಲಿ ಹಿರಿಯ ರಾಜಕಾರಣಿಗಳು, ಸಿನಿಮಾ ಮತ್ತು ಉದ್ಯಮಿಗಳು ಶಾಮೀಲಾಗಿದ್ದಾರೆ.ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲಎಂದು ಬಿಹಾರ ಸರ್ಕಾರ ಆರೋಪಿಸಿತ್ತು. ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ 24ಗಂಟೆಗಳಲ್ಲಿಯೇ ಅದನ್ನು ಒಪ್ಪಿಕೊಳ್ಳಲಾಗಿತ್ತು.
ಪ್ರಕರಣವನ್ನು ಸಿಬಿಐ ಸುಪರ್ದಿಗೆ ಒಪ್ಪಿಸಲು ಕೇಂದ್ರ ನಿರ್ಧರಿಸಿತ್ತು ಎಂದು ಅಟಾರ್ನಿ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್ನಲ್ಲಿ ಹೇಳಿದ್ದರು.ಇದು ರಾಜ್ಯದ ಸ್ವಾಯುತ್ತತೆ ಮೇಲೆ ನೇರ ದಾಳಿಯಾಗಿದೆ.
ಮುಂಬೈ ಪೊಲೀಸರು ಜಗತ್ತಿನಲ್ಲಿಯೇ ಉತ್ತಮ ತನಿಖಾ ಸಂಸ್ಥೆ ಮತ್ತು ವೃತ್ತಿನಿರತ ತಂಡ ಎಂದು ಹೇಳಿದ ರಾವುತ್, ಇದೇ ಪೊಲೀಸರು ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸಿ ಇದರಲ್ಲಿ ಭಾಗಿಯಾಗಿದ್ದ ಪ್ರಮುಖ ವ್ಯಕ್ತಿಗಳನ್ನು ಜೈಲಿಗಟ್ಟಿದ್ದರು.ಮುಂಬೈ ಪೊಲೀಸರು 26/11 ಭಯೋತ್ಪಾದನಾ ದಾಳಿಯ ತನಿಖೆ ನಡೆಸಿ ಅಪರಾಧಿ ಅಜ್ಮಲ್ ಕಸಬ್ ನೇಣಿಗೇರುವಂತೆ ಮಾಡಿದರು ಎಂದಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಅದು ಹತ್ಯೆ ಎಂದು ಪದೇ ಪದೇ ಹೇಳುವುದಕ್ಕೆ ಯಾವುದೇ ಆಧಾರವಿಲ್ಲ. ಮುಂಬೈ ಪೊಲೀಸರು ಜೀರೊ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಬೇಕಿತ್ತು ಎಂದಿದ್ದಾರೆ ರಾವುತ್.
ಸುಶಾಂತ್ ಸಾವಿನ ನಂತರ ಕೆಲವೇ ದಿನಗಳಲ್ಲಿ ಯಾವುದೇ ದೂರು ದಾಖಲಿಸದೆ ಅವರ ಕುಟುಂಬ ಮುಂಬೈನಿಂದ ಪಟನಾಗೆ ಹೋಗಿತ್ತು. ಬಿಜೆಪಿ ಈ ಪ್ರಕರಣವನ್ನು ರಾಜಕೀಯ ಮಾಡುವುದ ಜತೆಗೆ ಮಹಾರಾಷ್ಟ್ರ ಸಚಿವ ಸಂಪುಟದ ಯುವ ಸಚಿವರೊಬ್ಬರ ಹೆಸರಿನ ಜತೆ ತಳುಕು ಹಾಕಿಸಿ ಸಂಚಲನ ಸೃಷ್ಟಿಸಿತ್ತು. ಎರಡು ಇಂಗ್ಲಿಷ್ ಸುದ್ದಿವಾಹಿನಿಗಳು ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ಸವಾಲೆಸೆದು ಜನರನ್ನು ಗೊಂದಲಕ್ಕೀಡುಮಾಡಿತ್ತು.
ಮುಂಬೈ ಪೊಲೀಸರು ಮಾಧ್ಯಮದವರಲ್ಲಿಮಾತನಾಡಬೇಕಿತ್ತು. ಯಾವುದಾದರೂ ರಾಜಕಾರಣಿ ಅಥವಾ ಸಚಿವರ ಹೆಸರು ಇದ್ದರೆ ಆ ಹೇಳಿಕೆ ದಾಖಲಿಸಿಕೊಳ್ಳಬೇಕಾಗಿತ್ತು ಎಂದು ರಾವುತ್ ಅಭಿಪ್ರಾಯಪಟ್ಟಿದ್ದಾರೆ.
ಡಿನೋ ಮೋರಿಯಾ ಅವರ ಮನೆಯಲ್ಲಿ ನಡೆದ ಪಾರ್ಟಿಗೂ ಸುಶಾಂತ್ ಸಾವಿನ ಜತೆ ಸಂಬಂಧ ಕಲ್ಪಿಸಲಾಗುತ್ತಿದೆ. ಮೋರಿಯಾ ಮತ್ತು ಆದಿತ್ಯ ಠಾಕ್ರೆ ಗೆಳೆಯರು.ಈ ಗೆಳೆತನವನ್ನೇ ಗುರಿಯಾಗಿರಿಸುವುದು ತಪ್ಪು.
ಅದೇ ವೇಳೆ ಸುಶಾಂತ್ ಅವರ ಅಪ್ಪನೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ರಾವುತ್ ಹೇಳಿದ್ದಾರೆ. ಸುಶಾಂತ್ ಅಪ್ಪ ಎರಡನೇ ಮದುವೆಯಾಗಿದ್ದು ಅವನಿಗೆ ಇಷ್ಟವಾಗಲಿಲ್ಲ.ಸುಶಾಂತ್ ಎಷ್ಟು ಬಾರಿ ಪಟನಾದಲ್ಲಿರುವ ಮನೆಗೆ ಭೇಟಿ ನೀಡಿದ್ದಾರೆ ಎಂಬ ಸಂಗತಿ ಹೊರಬರಲಿ.ಆತನಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಬಿಟ್ಟುಹೋಗಿದ್ದು ಯಾಕೆ? ಆಕೆಯನ್ನೂ ತನಿಖೆಗೊಳಪಡಿಸಿ. ಆತ್ಮಹತ್ಯೆ ಪ್ರಕರಣವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ತಪ್ಪು ಎಂದು ರಾವುತ್ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಸಂಜಯ್ ರಾವುತ್ಗೆ ಟ್ವಿಟರ್ನಲ್ಲಿ ಛೀಮಾರಿ
ಸುಶಾಂತ್ ಅವರ ಸಾವು ಚಿಕ್ಕ ಸಂಗತಿ ಎಂದು ಸುದ್ದಿವಾಹಿನಿಯೊಂದರಲ್ಲಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಟ್ವೀಟಿಗರು ರಾವುತ್ ವಿರುದ್ಧ ಹರಿಹಾಯ್ದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.