ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಲ್ಪನೆಯ ಭಾರತದಲ್ಲಿ ದೇಶದ ಈಶಾನ್ಯ ಭಾಗಕ್ಕೆ ಸ್ಥಾನವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಪಾದಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ, ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್ನಿಂದ ಪಶ್ಚಿಮ ಬಂಗಾಳದವರೆಗೆ ಭಾರತವು ಎಲ್ಲ ಬಣ್ಣಗಳಲ್ಲಿ ಸುಂದರವಾಗಿದೆ ಎಂದಿದ್ದರು.
'ರಾಹುಲ್ ಗಾಂಧಿ ಪ್ರಕಾರ ಭಾರತವು ಪಶ್ಚಿಮ ಬಂಗಾಳದಲ್ಲಿ ಅಂತ್ಯಗೊಳ್ಳುತ್ತದೆ. ನನ್ನ ಸುಂದರವಾದ ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಈಶಾನ್ಯ ಭಾಗವು ಅವರ ಭಾರತದ ಕಲ್ಪನೆಯ ಭಾಗವಲ್ಲ' ಎಂದು ಕಿರಣ್ ರಿಜಿಜು ಟ್ವೀಟ್ ಮೂಲಕ ಟೀಕಿಸಿದ್ದಾರೆ.
For Shri Rahul Gandhi, India ends at West Bengal! The North East part of India, including my beautiful State of Arunachal Pradesh is not part of his idea of India. https://t.co/DrYApWFm7Y
ಈ ಮೊದಲು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನದ ವೇಳೆಯಲ್ಲಿ ಯೋಗಿ ಆದಿತ್ಯನಾಥ್, ಮತದಾರರು ಎಚ್ಚರ ತಪ್ಪಿದ್ದರೆ, ಉ್ತತರ ಪ್ರದೇಶವು ಮತ್ತೊಂದು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳವಾಗಿ ಬದಲಾಗುತ್ತದೆ ಎಂದು ಹೇಳಿರುವುದು ವಿವಾದವಾಗಿತ್ತು.
ಆದಿತ್ಯನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದ ರಾಹುಲ್ ಗಾಂಧಿ, ಭಾರತದ ಚೈತನ್ಯವನ್ನು ಅವಮಾನಿಸಬೇಡಿ. ನಮ್ಮ ಒಕ್ಕೂಟದಲ್ಲಿ ಶಕ್ತಿ ಇದೆ. ಇದು ನಮ್ಮ ಸಂಸ್ಕೃತಿ, ವೈವಿಧ್ಯತೆ, ಭಾಷೆ, ಜನ ಹಾಗೂ ರಾಜ್ಯಗಳ ಒಕ್ಕೂಟ ಎಂದು ಉತ್ತರಿಸಿದ್ದರು.