ಶಬರಿಮಲೆ: ನವೆಂಬರ್ 16 ರಂದು ಕೇರಳದ ಅಯ್ಯಪ್ಪ ದೇವಸ್ಥಾನವನ್ನು ತೆರೆದಾಗಿನಿಂದ ಯಾತ್ರಾರ್ಥಿಗಳು, ಪೊಲೀಸ್ ಸಿಬ್ಬಂದಿ ಮತ್ತು ದೇವಾಲಯದ ನೌಕರರು ಸೇರಿದಂತೆ ಒಟ್ಟು 39 ಜನರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .
ಒಟ್ಟು 39 ಪ್ರಕರಣಗಳು ದೇವಾಲಯ ಸಂಕೀರ್ಣ ಮತ್ತು ಮೂಲ ಶಿಬಿರಗಳಾದ ಪಂಬಾ ಮತ್ತು ನೀಳಕಲ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿನ ತಿರುವಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮೂಲಗಳ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ 27 ಮಂದಿ ವಿವಿಧ ಇಲಾಖೆಗಳ ನೌಕರರಾಗಿದ್ದು, ಅವರೆಲ್ಲರನ್ನೂ ತಕ್ಷಣವೇ ಕೋವಿಡ್ ಚಿಕಿತ್ಸಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ದೇವಾಲಯವು COVID-19 ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು, ದೇವಾಲಯದ ಆವರಣ ಮತ್ತು ಮೂಲ ಶಿಬಿರಗಳಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟಿಡಿಬಿಯ ಮೂಲಗಳು ತಿಳಿಸಿವೆ.
ಒಟ್ಟಾರೆ ಸೋಂಕಿತರಲ್ಲಿ ನಾಲ್ವರು ಟಿಡಿಬಿಯ ಸಿಬ್ಬಂದಿ, ಇಬ್ಬರು ತಾತ್ಕಾಲಿಕ ಸಿಬ್ಬಂದಿಯೂ ಇದ್ದಾರೆ ಎಂದು ಗೊತ್ತಾಗಿದೆ.
ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಶಬರಿಮಲೆಯಲ್ಲಿ ಈ ಬಾರಿ ಕೋವಿಡ್ ಮಾರ್ಗಸೂಚಿಯ ಪ್ರಕಾರ, 10-60 ವಯಸ್ಸಿನವರಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.