ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯ ಕಾವು ದಿನೇದಿನೇ ಏರುತ್ತಿದ್ದರೆ, ಮುಖಂಡರು ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತಿರುವುದು ಆಡಳಿತಾರೂಢ ಟಿಎಂಸಿಗೆ ತಲೆನೋವಾಗಿ ಪರಿಣಮಿಸಿದೆ.
ಟಿಎಂಸಿಯ ಐದು ಜನ ಶಾಸಕರು ಸೋಮವಾರ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಮಾಲ್ಡಾ ಜಿಲ್ಲಾ ಪರಿಷದ್ ಮೇಲಿನ ತನ್ನ ನಿಯಂತ್ರಣವನ್ನು ಸಹ ಟಿಎಂಸಿ ಕಳೆದುಕೊಂಡಂತಾಗಿದೆ.
ಮಮತಾ ಬ್ಯಾನರ್ಜಿಯ ಆಪ್ತೆಯಾಗಿದ್ದ ಶಾಸಕಿ ಸೋನಾಲಿ ಗುಹಾ, 80 ವರ್ಷದ ರವೀಂದ್ರನಾಥ್ ಭಟ್ಟಾಚಾರ್ಯ, 85 ವರ್ಷದ ಜತು ಲಹಿರಿ, ಮಾಜಿ ಫುಟ್ಬಾಲ್ ಆಟಗಾರ ದೀಪೇಂದು ಬಿಸ್ವಾಸ್ ಹಾಗೂ ಶೀತಲ್ ಸರ್ದಾರ್ ಬಿಜೆಪಿ ಸೇರಿರುವ ಶಾಸಕರು.
ಕೈಗಾರಿಕೆಗಾಗಿ ಸಿಂಗೂರ್ನಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಚಳವಳಿಯಲ್ಲಿ ರವೀಂದ್ರನಾಥ್ ಭಟ್ಟಾಚಾರ್ಯ ಮುಂಚೂಣಿಯಲ್ಲಿದ್ದರು.