ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯನ್ನು ಹೆದ್ದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ಪತ್ನಿ: ವಿಚಿತ್ರವಾಗಿದೆ ಕಾರಣ!

Last Updated 20 ಮಾರ್ಚ್ 2023, 4:59 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರ ಪ್ರದೇಶ): ಮದುವೆಯಾಗಿ ದಿನ ಕಳೆದಿರಲಿಲ್ಲ. ಪತಿ ಬಹಳ ಉತ್ಸಾಹದಿಂದ ಪತ್ನಿಯನ್ನು ಮನೆದುಂಬಿಸಿಕೊಳ್ಳಲು ತನ್ನೂರಿಗೆ ಕರೆದುಕೊಂಡು ಹೊರಟಿದ್ದ. ಆದರೆ ಪತಿಯನ್ನು ಅರ್ಧ ದಾರಿಯಲ್ಲೇ ಬಿಟ್ಟು ಪತ್ನಿ ತವರಿಗೆ ಮರಳಿದ ವಿಚಿತ್ರ ಘಟನೆ ವಾರಣಾಸಿ-ಕಾನ್ಪುರ್ ಹೆದ್ದಾರಿಯಲ್ಲಿ ನಡೆದಿದೆ.

ಘಟನೆಗೆ ಕಾರಣವು ಬಹಳ ಮಜವಾಗಿದೆ. ರಾಜಸ್ಥಾನದ ಬಿಕಾನೇರ್ ನಿವಾಸಿಯಾಗಿರುವ ರವಿ ಎಂಬ ಯುವಕನೊಂದಿಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ವಾರಾಣಸಿಯಲ್ಲಿ ವಿವಾಹ ಸಮಾರಂಭವೂ ನೆರವೇರಿತ್ತು.

ವರ ಮದುವೆಗೂ ಮೊದಲು ತನ್ನ ಹುಟ್ಟೂರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಎಂದು ವಧುವಿಗೆ ಹೇಳಿದ್ದ. ಆದರೆ ಮದುವೆಯಾದ ನಂತರ ಆತ ತನ್ನ ಪತ್ನಿಯನ್ನು ರಾಜಸ್ಥಾನದತ್ತ ಕರೆದುಕೊಂಡು ಹೊರಟಿದ್ದಾನೆ. ಬಸ್‌ನಲ್ಲಿ 7 ತಾಸು ಪ್ರಯಾಣಿಸಿದರೂ ಪತಿಯ ಮನೆ ತಲುಪದಿದ್ದಾಗ ಪತ್ನಿಗೆ ಅನುಮಾನ ಪ್ರಾರಂಭವಾಗಿದೆ. ಅಲ್ಲಿ ಆಕೆಗೆ ತನ್ನ ಪತಿ ಸುಳ್ಳು ಹೇಳಿದ್ದು, ಉತ್ತರಪ್ರದೇಶಕ್ಕೆ ಸೇರಿದವನಲ್ಲ ಎಂಬ ಸತ್ಯ ಗೊತ್ತಾಗಿದೆ.

ವಾರಣಾಸಿ-ಕಾನ್ಪುರ್ ಹೆದ್ದಾರಿಯಲ್ಲಿ ಪೊಲೀಸ್ ಸಹಾಯವಾಣಿ(ಪಿಆರ್‌ವಿ) ಸಂಖ್ಯೆ-112ಕ್ಕೆ ವಧು ಕರೆ ಮಾಡಿ, ತನ್ನ ಪೋಷಕರ ಮನೆಗೆ ಮರಳಲು ಸಹಾಯ ಕೋರಿದ್ದಾಳೆ ಎಂದು ಚಕೇರಿ ಎಸಿಪಿ ಅಮರನಾಥ್ ಯಾದವ್ ಹೇಳಿದ್ದಾರೆ.

ನವವಿವಾಹಿತ ವಧು ತನ್ನ ಅತ್ತೆ ಮನೆಗಾಗಿ ಇಷ್ಟು ದೂರ ಪ್ರಯಾಣ ಮಾಡಲು ನಿರಾಕರಿಸಿದ್ದಾಳೆ. ಪತಿ ಒಪ್ಪದಿದ್ದಾಗ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
‘ನಾನು ವಾರಣಾಸಿ ಬಿಟ್ಟು ಏಳು ಗಂಟೆಯಾಗಿದೆ. ಇನ್ನೂ ನನ್ನ ಅತ್ತೆಯ ಮನೆಗೆ ತಲುಪಿಲ್ಲ. ಸಂಪೂರ್ಣವಾಗಿ ಆಯಾಸಗೊಂಡಿರುವೆ ಮತ್ತು ಈಗ ನಾನು ರಾಜಸ್ಥಾನಕ್ಕೆ ಹೋಗಲಾರೆ. ನಾನು ಅಷ್ಟು ದೂರ ಹೋಗುವುದಿಲ್ಲ’ಎಂದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ವಧು ತಿಳಿಸಿದ್ದಾಳೆ.

ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ವಧುವಿನ ಕುಟುಂಬಸ್ಥರಿಗೆ ಎಲ್ಲವೂ ತಿಳಿದಿತ್ತು ಎಂದು ವರ ತಿಳಿಸಿದ್ದಾನೆ. ಆದರೆ ವಧುವಿನ ಕುಟುಂಬ ಇದನ್ನು ನಿರಾಕರಿಸಿದೆ. ಹೀಗಾಗಿ ಪೊಲೀಸರು ವಧುವನ್ನು ವಾಪಾಸ್‌ ವಾರಣಾಸಿಗೆ ಕಳುಹಿಸಿದ್ದಾರೆ. ಮದುವೆಯಾದ ವರ ಕೊನೆಗೆ ಪತ್ನಿಯಿಲ್ಲದೆ ಏಕಾಂಗಿಯಾಗಿ ಹುಟ್ಟೂರಿಗೆ ಮರಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT