‘ನಾನು ಮಹಿಳೆ, ನಾನು ಹೋರಾಡಬಲ್ಲೆʼ: ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಿಯಾಂಕಾ ಯತ್ನ

ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇತ್ತೀಚೆಗೆ ನಡೆದ ರ್ಯಾಲಿಯೊಂದರಲ್ಲಿ, ʼನಾನು ಮಹಿಳೆ, ನಾನು ಹೋರಾಡಬಲ್ಲೆʼ ಎಂದು ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾರ ಈ ಘೋಷಣೆಯು ಪುನಶ್ಚೇತನದ ಪ್ರಯತ್ನದಲ್ಲಿರುವ ಪಕ್ಷದತ್ತ ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.
ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
ದಶಕದ ಕಾಲದಿಂದಲೂ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರುವ ರಾಷ್ಟ್ರೀಯವಾದಿ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2024ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಸವಾಲು ನೀಡಬಲ್ಲದೇ ಎಂಬ ಸುಳಿವನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ನೀಡಲಿದೆ.
ಇದನ್ನೂ ಓದಿ: ಮಹಿಳೆಗೆ ಮನ್ನಣೆ: ಪ್ರತ್ಯೇಕ ಪ್ರಣಾಳಿಕೆ; ಪ್ರಿಯಾಂಕಾ ಭರವಸೆ
ಆರ್ಥಿಕ ಅಭಿವೃದ್ಧಿ, ಸದೃಢ- ನವಭಾರತ ನಿರ್ಮಾಣದ ಭರವಸೆಯೊಂದಿಗೆ 2014ರಲ್ಲಿ ಅಧಿಕಾರಕ್ಕೇರಿದ ಮೋದಿ, 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರು.
136 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷವು ನಾಯಕತ್ವದಲ್ಲಿನ ವೈಫಲ್ಯದಿಂದಾಗಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಹಾದಿ ಸುಗಮವಾಯಿತು.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿಫಲವಾದ ಕಾರಣ ರಾಹುಲ್ ಗಾಂಧಿ ಪಕ್ಷದ ನಾಯಕತ್ವ ತೊರೆದಿದ್ದರು. ಬಳಿಕ ಸೋನಿಯಾ ಗಾಂಧಿಯವರೇ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡಿದ್ದಾರೆ. ಆದಾಗ್ಯೂ ಅವರ ನಾಯಕತ್ವದ ಶೈಲಿಯನ್ನು ಟೀಕಿಸುವವರು ಪಕ್ಷದಲ್ಲಿ ಸಾಕಷ್ಟು ಜನರಿದ್ದಾರೆ.
2019ರಲ್ಲಿ ರಾಜಕೀಯ ಪ್ರವೇಶಿಸಿದ ಪ್ರಿಯಾಂಕಾ, ಮಹಿಳಾ ನಾಯಕತ್ವಕ್ಕೆ ಮನ್ನಣೆ ತಂದುಕೊಡುವ ಜೊತೆಗೆ ಕಾಂಗ್ರೆಸ್ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬಿಜೆಪಿಯ ಹಿಂದೂ ಅಜೆಂಡಾಕ್ಕೆ ಪರ್ಯಾಯವಾಗಿ, ಕಾಂಗ್ರೆಸ್ ತನ್ನ ಜಾತ್ಯತೀತ ಪರಂಪರೆಯೊಂದಿಗೆ, ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರೀಯ ಪಕ್ಷವೆಂಬಂತೆ ಉತ್ತರ ಪ್ರದೇಶದಲ್ಲಿ ಬಿಂಬಿತವಾಗುತ್ತಿದೆ.
ಇದನ್ನೂ ಓದಿ: ಯುಪಿ: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ 100ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್
ದೇಶದಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದರ ವಿರುದ್ಧ ಮಹಿಳೆಯರು ಜಾಗೃತರಾಗಿದ್ದು, ಪ್ರಿಯಾಂಕಾ ಮಹಿಳೆಯರಿಗೆ ಬದಲಾವಣೆಯ ಭರವಸೆ ನೀಡುತ್ತಿದ್ದಾರೆ.
ಕೋವಿಡ್-19 ನಿರ್ವಹಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ವಿಚಾರದಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ. ಹಾಗೆಯೇ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನೂ ಸರ್ಕಾರ ಎದುರಿಸುತ್ತಿದೆ.
ಇದೇವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಭದ್ರಕೋಟೆಯಾಗಿರುವ ಗೋರಖಪುರದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ, ʼನಾನು ಮತ್ತು ಕಾಂಗ್ರೆಸ್ ಪಕ್ಷವು ನಿಮಗಾಗಿ ಹೋರಾಟ ನಡೆಸಲಿದ್ದೇವೆ ಎಂದು ಮಹಿಳೆಯರಿಗೆ ಹೇಳಲು ಬಯಸುತ್ತೇನೆʼ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: 2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲು 2022ರಲ್ಲಿ ಯೋಗಿ ಸಿಎಂ ಆಗಬೇಕು: ಅಮಿತ್ ಶಾ
ಈ ರ್ಯಾಲಿಯಲ್ಲಿ ಅಂದಾಜು 40,000 ಜನರು ಭಾಗವಹಿಸಿದ್ದರು. ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರಿದ್ದರು ಎನ್ನಲಾಗಿದೆ.
ʼಜನರು, ಮುಖ್ಯವಾಗಿ ಮಹಿಳೆಯರು ಭರವಸೆಗಳೊಂದಿಗೆ ಕಾಂಗ್ರೆಸ್ನತ್ತ ನೋಡಲಾರಂಭಿಸಿದ್ದಾರೆ. ನಮ್ಮ ಪಕ್ಷವು ಮಹಿಳೆಯರೊಂದಿಗೆ ಮತ್ತು ಅವರ ಧ್ವನಿಯಾಗಿ ನಿಲ್ಲಲಿದೆʼ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತೆ ಸುನಿತಾ ಮಿಶ್ರಾ ಎನ್ನುವವರು ಹೇಳಿದ್ದಾರೆ.
ರಾಜ್ಯದ 403 ಕ್ಷೇತ್ರಗಳ ಪೈಕಿ ಶೇ. 40 ರಷ್ಟು ಸ್ಥಾನಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕಾಂಗ್ರೆಸ್ ನೀಡಿರುವ ವಾಗ್ದಾನವನ್ನೂ ಮತದಾರರು ಸ್ವಾಗತಿಸಿದ್ದಾರೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋರಖಪುರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಪಾಸ್ವಾನ್, ʼಪಕ್ಷಕ್ಕೆ ಸೇರಿಕೊಳ್ಳಲು ಸಾಕಷ್ಟು ಮಹಿಳೆಯರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಮಹಿಳೆಯರು ಬದಲಾವಣೆಯನ್ನು ತರಲಿದ್ದಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮತಕ್ಕಾಗಿ ರಾಜ ಮಿಹಿರ್ ಭೋಜ್ ಜಾತಿ ಬದಲಿಸಿದ ಯೋಗಿ: ಅಖಿಲೇಶ್ ಟೀಕೆ
ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಸ್ಮಾರ್ಟ್ಫೋನ್ ವಿತರಣೆ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ, ಕುಟುಂಬವೊಂದಕ್ಕೆ ವಾರ್ಷಿಕ ಮೂರು ಅಡುಗೆ ಅನಿಲ ಸಿಲಿಂಡರ್ಗಳ ಉಚಿತ ವಿತರಣೆ, ಉದ್ಯೋಗದಲ್ಲಿ ಲಿಂಗಾಧಾರಿತ ಮೀಸಲಾತಿ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
ಆದಾಗ್ಯೂ ನಾಯಕತ್ವದ ಬಿಕ್ಕಟ್ಟು ಸೇರಿದಂತೆ ಸಾಕಷ್ಟು ಆಂತರಿಕ ಸಮಸ್ಯೆಗಳನ್ನು ಕಾಂಗ್ರೆಸ್ ಎದುರಿಸುತ್ತಿದೆ.
ರಾಜ್ಯ ನಾಯಕರು ಕೇವಲ ಹೊಗಳುಭಟ್ಟರ ಮಾತುಗಳನ್ನಷ್ಟೇ ಕೇಳುತ್ತಿದ್ದಾರೆ. ಪಕ್ಷದಲ್ಲಿ ಇಂತಹವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಎಂಬಂತೆ ಹೆಚ್ಚಾಗಿದೆʼ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಗೋರಖಪುರ ವಿಧಾನಸಭೆ ಕ್ಷೇತ್ರದ ಮಾಜಿ ಅಭ್ಯರ್ಥಿ ರಾಣಾ ರಾಹುಲ್ ಸಿಂಗ್ ಆರೋಪಿಸಿದ್ದರು.
ʼತಳಮಟ್ಟದಿಂದ ಶ್ರಮಿಸಿದ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆʼ ಎಂದೂ ದೂರಿದ್ದರು.
ಇದನ್ನೂ ಓದಿ: ಹಿಮಾಚಲ ಪ್ರದೇಶ: 1 ಲೋಕಸಭೆ, 3 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
ಈ ಬಗ್ಗೆ ಪ್ರಿಯಾಂಕಾ ವಾದ್ರಾ ನಿಕಟವರ್ತಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಸಂಘಟನಾ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ʼಬದಲಾವಣೆ ಸುಲಭವಲ್ಲ. ಆದರೆ, ಬದಲಾವಣೆ ಒಳ್ಳೆಯದು. ಈ ಬದಲಾವಣೆಗಳು ದೀರ್ಘಾವಧಿವರೆಗೆ ಕೆಲಸ ಮಾಡಲಿವೆʼ ಎಂದು ಸುಪ್ರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಗೆ ಕೇವಲ 4-7 ಸ್ಥಾನ: ಸಿ-ವೋಟರ್
ಸಿ-ವೋಟರ್ ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ರಾಜ್ಯದ 403 ಸ್ಥಾನಗಳಲ್ಲಿ 240ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿಯು ಸುಲಭವಾಗಿ ಜಯಿಸಲಿದೆ. ಕಾಂಗ್ರೆಸ್ ಮೂರರಿಂದ ಏಳು ಸ್ಥಾನಗಳನ್ನಷ್ಟೇ ಗೆಲ್ಲಬಹುದು. ಇದರೊಂದಿಗೆ ಜಯಗಳಿಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ ಎನ್ನಲಾಗಿದೆ.
2017ರ ಚುನಾವಣೆಯಲ್ಲಿ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 312 ಸ್ಥಾನಗಳನ್ನು ಜಯಿಸಿ ಅಧಿಕಾರಕ್ಕೇರಿತ್ತು.
ಇವನ್ನೂ ಓದಿ
* ಉ.ಪ್ರದೇಶ ಚುನಾವಣೆ | ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಪ್ರಿಯಾಂಕಾ
* ಗೋರಖಪುರ: ಬಿಜೆಪಿಗೆ ಕಠಿಣ ಹಾದಿ
* ಜನರಿಗೆ ಕಷ್ಟ ಕೊಡುವುದರಲ್ಲಿ ಮೋದಿ ಸರ್ಕಾರದಿಂದ ದಾಖಲೆ: ಪ್ರಿಯಾಂಕಾ ಗಾಂಧಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.