ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಉತ್ತರಾಖಂಡ ರೆಸಾರ್ಟ್ ಸ್ವಾಗತಗಾರ್ತಿಯ ಕೊಲೆ

ಬಿಜೆಪಿ ಮುಖಂಡನ ರೆಸಾರ್ಟ್‌ನಲ್ಲಿ ಸ್ವಾಗತಗಾರ್ತಿಯಾಗಿದ್ದ ಯುವತಿ: ನಾಲೆಯಲ್ಲಿ ಮೃತದೇಹ ಪತ್ತೆ
Last Updated 24 ಸೆಪ್ಟೆಂಬರ್ 2022, 14:03 IST
ಅಕ್ಷರ ಗಾತ್ರ

ಲಖನೌ/ಡೆಹ್ರಾಡೂನ್‌: ರೆಸಾರ್ಟ್‌ಗೆ ಭೇಟಿ ನೀಡಿದ್ದ ಅತಿಥಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ರೆಸಾರ್ಟ್‌ನ ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಈ ಸಂಬಂಧವನಂತರ ರೆಸಾರ್ಟ್‌ನ ಮಾಲೀಕಪುಲ್ಕಿತ್‌ ಆರ್ಯ, ಮ್ಯಾನೇಜರ್‌ ಸೌರಭ್‌ ಭಾಸ್ಕರ್‌ ಮತ್ತು ರೆಸಾರ್ಟ್‌ನ ಉದ್ಯೋಗಿ ಅಂಕಿತ್‌ ಗುಪ್ತಾ ಎಂಬುವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮೂವರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಪುಲ್ಕಿತ್‌,ಉತ್ತರಾಖಂಡ ರಾಜ್ಯ ಬಿಜೆಪಿಯ ಹಿರಿಯ ಮುಖಂಡ ವಿನೋದ್‌ ಆರ್ಯ ಅವರ ಮಗ.

ರಿಷಿಕೇಶ ಸಮೀಪದ ಚೀಲಾ ನಾಲೆಯಲ್ಲಿ19 ವರ್ಷದ ಅಂಕಿತಾ ಮೃತದೇಹ ಶನಿವಾರ ಪತ್ತೆಯಾಗಿದ್ದು, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಅದನ್ನು ಹೊರತೆಗೆದಿದ್ದಾರೆ.

‘ಸೆಪ್ಟೆಂಬರ್‌ 18ರಂದು ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದ ಅಂಕಿತಾ, ರೆಸಾರ್ಟ್‌ಗೆ ಬರುವ ಅತಿಥಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪುಲ್ಕಿತ್‌ ಹಾಗೂ ರೆಸಾರ್ಟ್‌ನ ಮ್ಯಾನೇಜರ್‌ ಪೀಡಿಸುತ್ತಿರುವ ವಿಚಾರವನ್ನು ಹೇಳಿದ್ದಳು. ತಾನು ಸಂಕಷ್ಟಕ್ಕೆ ಸಿಲುಕಿರುವುದಾಗಿಯೂ ಅಳಲು ತೋಡಿಕೊಂಡಿದ್ದಳು’ ಎಂದು ಡಿಜಿಪಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

‘ಅದೇ ದಿನ ರಾತ್ರಿ 8.30ಕ್ಕೆ ಕರೆ ಮಾಡಿದಾಗ ಅಂಕಿತಾ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗಲಿಲ್ಲ. ಕೂಡಲೇ ಪುಲ್ಕಿತ್‌ಗೆ ಕರೆ ಮಾಡಿದಾಗ ಆಕೆ ಕೊಠಡಿಗೆ ತೆರಳಿದ್ದಾಗಿ ಹೇಳಿದ್ದ. ಮರುದಿನ ಬೆಳಿಗ್ಗೆ ಮತ್ತೆ ಪುಲ್ಕಿತ್‌ಗೆ ಹಲವು ಬಾರಿ ಕರೆ ಮಾಡಿದೆ. ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಬಳಿಕ ಮತ್ತೊಬ್ಬ ಆರೋಪಿ ಅಂಕಿತ್‌ಗೆ ಕರೆ ಮಾಡಿದೆ. ಅಂಕಿತಾ ಜಿಮ್‌ನಲ್ಲಿ ಇರುವುದಾಗಿ ಆತ ಹೇಳಿದ್ದ. ರೆಸಾರ್ಟ್‌ನ ಬಾಣಸಿಗನಿಗೆ ಕರೆ ಮಾಡಿದಾಗ ಆಕೆಯನ್ನು ರೆಸಾರ್ಟ್‌ನಲ್ಲಿ ನೋಡೇ ಇಲ್ಲ ಎಂದು ಆತ ತಿಳಿಸಿದ್ದಾಗಿ ಅಂಕಿತಾಳ ಸ್ನೇಹಿತ ಮಾಹಿತಿ ನೀಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ತನಿಖೆಗೆ ಎಸ್‌ಐಟಿ

ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಶನಿವಾರ ಆದೇಶ ಹೊರಡಿಸಿದ್ದಾರೆ. ಡಿಐಜಿ ಪಿ.ರೇಣುಕಾ ದೇವಿ ನೇತೃತ್ವದ ತಂಡವು ಈ ಕುರಿತು ತನಿಖೆ ಕೈಗೊಳ್ಳಲಿದೆ.

ತನಿಖೆ ಆರಂಭಿಸಿರುವ ಪೊಲೀಸರು ರೆಸಾರ್ಟ್‌ಗೆ ಭೇಟಿ ನೀಡಿ ಅಲ್ಲಿನ ಮಹಿಳಾ ಉದ್ಯೋಗಿಗಳ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಪ್ರತಿಭಟನೆ

ಘಟನೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

‘ಯುವತಿಯು ಸೆಪ್ಟೆಂಬರ್‌ 18ರಂದೇ ನಾಪತ್ತೆಯಾಗಿದ್ದಾಳೆ. ನಾಲ್ಕು ದಿನಗಳ ನಂತರ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಇದು ಸಾಕ್ಷಿ. ರಾಜ್ಯವು ಮಹಿಳೆಯರ ಪಾಲಿಗೆ ಅಷ್ಟು ಸುರಕ್ಷಿತವಾಗಿಲ್ಲ ಎಂಬುದೂ ಇದರಿಂದ ಮನದಟ್ಟಾಗುತ್ತದೆ’ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕರಣ್‌ ಮಹ್ರಾ ದೂರಿದ್ದಾರೆ.

ಆರೋಪಿಯ ಅಪ್ಪ, ಅಣ್ಣ ವಜಾ

ಪುಲ್ಕಿತ್‌ ಬಂಧನದ ಬೆನ್ನಲ್ಲೇ ಬಿಜೆಪಿಯು ಆತನ ತಂದೆ ವಿನೋದ್‌ ಆರ್ಯ ಹಾಗೂ ಅಣ್ಣ ಅಂಕಿತ್‌ ಆರ್ಯ ಅವರನ್ನು ಪಕ್ಷದಿಂದ ವಜಾಗೊಳಿಸಿದೆ.

ಅಂಕಿತ್‌ ಅವರು ಉತ್ತರಾಖಂಡ ಹಿಂದುಳಿದ ವರ್ಗಗಳ ಆಯೋಗದ ಉಪಾಧ್ಯಕ್ಷರಾಗಿದ್ದರು.

ಪೊಲೀಸ್‌ ವಾಹನದ ಮೇಲೆ ದಾಳಿ

ಅಂಕಿತಾ ಕೊಲೆ ವಿಚಾರ ಗೊತ್ತಾದ ಕೂಡಲೇ ಉತ್ತರಾಖಂಡದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಪ್ರತಿಭಟನಕಾರರ ಗುಂಪೊಂದು ಪೊಲೀಸ್‌ ವಾಹನದ ಮೇಲೆ ದಾಳಿ ನಡೆಸಿದೆ. ಕಾರಿನ ಗಾಜುಗಳನ್ನು ಒಡೆದು ಹಾಕಿದ ಉದ್ರಿಕ್ತರು, ಆರೋಪಿಗಳನ್ನು ಕಾರಿನಿಂದ ಆಚೆ ಎಳೆಯಲೂ ಪ್ರಯತ್ನಿಸಿದ್ದಾರೆ.

ಯಮಕೇಶ್ವರ ಕ್ಷೇತ್ರದ ಶಾಸಕಿ ರೇಣು ಬಿಷ್ಠ್‌ ಅವರು ಚೀಲಾ ನಾಲೆ ಮಾರ್ಗವಾಗಿ ತೆರಳುತ್ತಿದ್ದಾಗ ಪ್ರತಿಭಟನಕಾರರ ಗುಂಪು ಅವರ ಕಾರಿನ ಮೇಲೆ ದಾಳಿ ನಡೆಸಿ ಗಾಜುಗಳನ್ನು ಒಡೆದು ಹಾಕಿದೆ. ಘಟನೆಯಲ್ಲಿ ರೇಣು ಅವರಿಗೆ ಯಾವುದೇ ಅಪಾಯವಾಗಿಲ್ಲ. ಪೊಲೀಸರ ಬೆಂಗಾವಲಿನಲ್ಲಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಗುಂಪೊಂದು ಆರೋಪಿಗಳನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದೆ.

ಭೋಗ್‌ಪುರದಲ್ಲಿರುವ ರೆಸಾರ್ಟ್‌ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ. ರೆಸಾರ್ಟ್‌ನ ಕೆಲ ಭಾಗಗಳನ್ನು ಅನಧಿಕೃತವಾಗಿ ನಿರ್ಮಿಸಿರುವ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು ಶುಕ್ರವಾರ ರಾತ್ರಿ ಅವುಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ರೆಸಾರ್ಟ್‌ ಸಮೀಪದಲ್ಲೇ ಆರೋಪಿ ಪುಲ್ಕಿತ್‌ ಒಡೆತನದ ಉಪ್ಪಿನ ಕಾಯಿ ತಯಾರಿಕಾ ಘಟಕವಿದ್ದು, ಅದಕ್ಕೆ ಪ್ರತಿಭಟನಕಾರರು ಶನಿವಾರ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ.

ಸಹಾಯಕ್ಕಾಗಿ ಅಂಗಲಾಚಿದ್ದ ಯುವತಿ

‘ಸೆಪ್ಟೆಂಬರ್‌ 18ರಂದು ಸಂಜೆ ಆರೋಪಿಗಳು ಅಂಕಿತಾಳನ್ನು ಕರೆದುಕೊಂಡು ರೆಸಾರ್ಟ್‌ನಿಂದ ಹೊರ ಹೋಗಿದ್ದರು. ಚೀಲಾ ನಾಲೆ ಬಳಿ ಕಾರು ನಿಲುಗಡೆ ಮಾಡಿದ್ದರು. ಅಲ್ಲಿ ಅಂಕಿತಾ ಮತ್ತು ಪುಲ್ಕಿತ್‌ ನಡುವೆ ಜಗಳ ನಡೆದಿತ್ತು. ಕೋಪಗೊಂಡಿದ್ದ ಪುಲ್ಕಿತ್‌ ಆಕೆಯನ್ನು ನಾಲೆಗೆ ತಳ್ಳಿದ್ದ. ಬಳಿಕ ಮೂವರು ಅಲ್ಲಿಂದ ವಾಪಾಸ್ಸಾಗಿದ್ದರು. ಆಕೆ ಸಹಾಯಕ್ಕಾಗಿ ಅಂಗಲಾಚಿದರೂ ಆರೋಪಿಗಳ ಮನಸ್ಸು ಕರಗಿರಲಿಲ್ಲ’ ಎಂದು ಮೂಲಗಳು ಹೇಳಿವೆ.

‘ಪೊಲೀಸರ ದಿಕ್ಕುತಪ್ಪಿಸುವ ಉದ್ದೇಶದಿಂದ ಪುಲ್ಕಿತ್‌, ರೆಸಾರ್ಟ್‌ಗೆ ಮರಳಿದ ಕೂಡಲೇ ಠಾಣೆಗೆ ಹೋಗಿದ್ದ. ಅಲ್ಲಿ ಅಂಕಿತಾ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದ. ತನಿಖೆ ಕೈಗೊಂಡಿದ್ದ ಅಧಿಕಾರಿಗಳಿಗೆ ಪುಲ್ಕಿತ್‌ ಮೇಲೆ ಅನುಮಾನ ಮೂಡಿತ್ತು. ಹೀಗಾಗಿ ಆತನನ್ನು ವಶಕ್ಕೆ ‍ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ’ ಎಂದೂ ತಿಳಿಸಿವೆ.

*****

ಮಹಿಳೆಯರು ಸುರಕ್ಷಿತವಾಗಿದ್ದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆ. ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿರುವ ಘಟನೆಗಳು ಆಘಾತ ಉಂಟು ಮಾಡಿವೆ.

–ರಾಹುಲ್ ಗಾಂಧಿ, ಕಾಂಗ್ರೆಸ್‌ ಮುಖಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT