ನವದೆಹಲಿ: ಕಾಶ್ಮೀರಿ ಪಂಡಿತರು ಏಕೆ ಇನ್ನೂ ಸುರಕ್ಷಿತರಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ಕಾಶ್ಮೀರಿ ಪಂಡಿತರೊಬ್ಬರನ್ನು (ರಾಹುಲ್ ಭಟ್) ಅವರ ಕಚೇರಿಯಲ್ಲೇ ಹತ್ಯೆ ಮಾಡಲಾಯಿತು. ಕಾಶ್ಮೀರಿ ಪಂಡಿತರು ಏಕೆ ಇನ್ನೂ ಸುರಕ್ಷಿತವಾಗಿಲ್ಲ? ದೇಶ ಆತಂಕದಲ್ಲಿದೆ ಎಂಬುದು ಕಾಶ್ಮೀರಿ ಪಂಡಿತ ಸಮುದಾಯಕ್ಕೂ ಅನಿಸುತ್ತಿರಬಹುದು. ಕಾಶ್ಮೀರದಲ್ಲಿರುವ ಸಮುದಾಯದ ಬಹಳಷ್ಟು ಮಂದಿ ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರಕ್ಕೆ ತೆರಳಿದವರಾಗಿದ್ದಾರೆ. ಈ ಘಟನೆ ನಂತರ ಅವರೆಲ್ಲ ಭಯಭೀತರಾಗಿದ್ದಾರೆ’ ಎಂದು ಅವರು ಹೇಳಿದರು.
‘ಘಟನೆ ನಂತರ ಕಾಶ್ಮೀರಿ ಪಂಡಿತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರತಿಭಟಿಸಲು ಮುಂದಾಗಿದ್ದರು. ಆದರೆ ಅವರನ್ನು ತಡೆಯಲಾಗಿದೆ. ಅವರ ಮೇಲೆ ಹಲ್ಲೆ ಮಾಡಲಾಗಿದೆ. ಅವರ ಮನೆಗಳಿಗೆ ಬೀಗ ಹಾಕಲಾಗಿದೆ. ರಾಜಕೀಯ ಮಾಡಲು ಇದು ಸಮಯವಲ್ಲ. ಸಮುದಾಯ ಈಗ ಸುರಕ್ಷತೆ ಬಯಸುತ್ತಿದೆ. ಸುರಕ್ಷತೆ ಸಿಗದೇ ಹೋದರೆ, ಇನ್ನಿತರ ಕಾಶ್ಮೀರಿ ಪಂಡಿತರು ಕಣಿವೆಗೆ ಹಿಂತಿರುಗುವುದಾದರೂ ಹೇಗೆ? ಅವರಿಗೆ ಭದ್ರತೆ ಒದಗಿಸುವತ್ತ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಬೇಕು’ ಎಂದು ಕೇಜ್ರಿವಾಲ್ ಆಗ್ರಹಿಸಿದರು.
ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ ಕಳೆದಗುರುವಾರ ಉಗ್ರನೊಬ್ಬ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್ ಭಟ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.
Few days back a Kashmiri pandit was killed in his office. It seems they had thought this through. The country is worried. Why are Kashmiri Pandits still not safe? A lot of them had been sent under a PM package. After this incident, all of them are scared: Delhi CM Arvind Kejriwal pic.twitter.com/7Ljy7vaIay
— ANI (@ANI) May 16, 2022
ಇವುಗಳನ್ನು ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.