ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆ (ಎನ್ಸಿಬಿ) ವಿರುದ್ಧ ಸುಲಿಗೆ ಸೇರಿದಂತೆ ವಿವಿಧ ಆರೋಪಗಳ ಕುರಿತು ಟ್ವೀಟ್ ಮಾಡಿರುವ ಪತ್ರದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎನ್ಸಿಬಿ ಉಪ ಮಹಾನಿರ್ದೇಶಕ ಮುತಾ ಅಶೋಕ್ ಜೈನ್ ಮಂಗಳವಾರ ತಿಳಿಸಿದ್ದಾರೆ.
ಎನ್ಸಿಬಿ ತನಿಖಾಧಿಕಾರಿ ಸಮೀರ್ ವಾಂಖೆಡೆಯ ವಿವಿಧ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಎನ್ಸಿಬಿಯ ಯಾರೋ ಒಬ್ಬ ವ್ಯಕ್ತಿ ಬರೆದಿರುವ ಪತ್ರವನ್ನು ಎನ್ಸಿಬಿ ಮಹಾ ನಿರ್ದೇಶಕ ಎಸ್.ಎನ್. ಪ್ರಧಾನ್ ಅವರಿಗೆ ಕಳುಹಿಸುತ್ತಿರುವುದಾಗಿ ಸಚಿವ ಮಲಿಕ್ ಟ್ವೀಟ್ ಮಾಡಿದ್ದರು.
ಆ ಪತ್ರದಲ್ಲಿ ಮಾದಕ ವಸ್ತು ನಿಯಂತ್ರಣಾ ಸಂಸ್ಥೆಯೊಳಗೆ 'ಸುಲಿಗೆ ದಂಧೆ' ನಡೆಸಲಾಗುತ್ತಿದೆ ಎಂಬುದು ಸೇರಿದಂತೆ 26 ಆರೋಪಗಳನ್ನು ಮಾಡಿದ್ದರು. ಸಚಿವ ಮಲಿಕ್ ಅವರು ಆ ಪತ್ರವನ್ನು ಎನ್ಸಿಬಿ ಮುಖ್ಯಸ್ಥರಿಗೆ ಕಳುಹಿಸಿ, ಸಂಬಂಧಿಸಿದಸಂಸ್ಥೆ ವಿರುದ್ಧ ತನಿಖೆ ನಡೆಸುವಂತೆ ಕೇಳಿದ್ದರು.
ಎನ್ಸಿಬಿ ಕಚೇರಿ ಹೊರಗಡೆ ಸುದ್ದಿಗಾರರು ಈ ಪತ್ರದ ಬಗ್ಗೆ ಅಶೋಕ್ ಜೈನ್ ಅವರನ್ನು ಕೇಳಿದಾಗ, ‘ವಾಟ್ಸ್ಆ್ಯಪ್ ಮೂಲಕಆ ಪತ್ರವನ್ನು ಸ್ವೀಕರಿಸಿದ್ದೇನೆ. ಅದರಲ್ಲಿರುವ ವಿಚಾರದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
‘ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್ಸಿಬಿ ಬಾಂಬೆ ಹೈಕೋರ್ಟ್ನಲ್ಲಿ ವಿರೋಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಈ ಪ್ರಕರಣದ ಬಗ್ಗೆ ಹೆಚ್ಚಿನದೇನನ್ನೂ ಹೇಳುವುದಿಲ್ಲʼಎಂದರು.