ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಟಿಕ್‌ ಆರ್ಟ್‌ ಗ್ಯಾಲರಿ

Last Updated 16 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕಲಬುರ್ಗಿ ನಗರದ ರೋಜಾ ಬಡಾವಣೆಯಲ್ಲಿರುವ ಆ ಮನೆಯ ನೆಲದ ಮೇಲೆ 275 ರಾಷ್ಟ್ರಗಳ ನಾಣ್ಯಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದಾರೆ. ಟೇಬಲ್‌ ಮೇಲೆ ಜಮಾನಾದ ರೇಡಿಯೊಗಳು, ಅಷ್ಟೇ ಪುರಾತನ ಕ್ಯಾಮೆರಾ, ಗ್ರಾಮಾಫೋನ್‌ಗಳಿವೆ. ನೋಡಿದ ಕೂಡಲೇ ‘ಇದು, ಯಾವ ಕಾಲದ್ದು’ ಎಂದು ಮೂಗಿನ ಬೆರಳಿಡುವಂತೆ ಮಾಡುತ್ತವೆ. ಸ್ವಲ್ಪ ಅತ್ತ ಕಣ್ಣು ಹೊರಳಿಸಿದರೆ, ಅಜ್ಜನ ಕಾಲದ ತೂಕದ ಕಲ್ಲುಗಳು, ಸೇರಿನಂತಹ ಅಳತೆ ಮಾಪನಗಳು, ದೊಡ್ಡ ಹಂಡೆ, ಬೀಗದ ಕೈಗಳು ಆಕರ್ಷಿಸುತ್ತವೆ. ಜತೆಗೆ, ಚಾಪಾ ಕಾಗದಗಳು (ಬಾಂಡ್ ಪೇಪರ್‌), ವಿವಿಧ ರಾಷ್ಟ್ರಗಳ ಧ್ವಜಗಳು, 1947 ರಲ್ಲಿ ಪ್ರಕಟಗೊಂಡ ಇಂಗ್ಲಿಷ್‌ ಹಾಗೂ ಉರ್ದು ದಿನಪತ್ರಿಕೆಗಳನ್ನು ಸಾಲಾಗಿ ಜೋಡಿಸಿರುವುದು ಕಣ್ಸೆಳೆಯುತ್ತದೆ.

ಇದು ವೃತ್ತಿಪರ ಛಾಯಾಗ್ರಾಹಕ ಮಹ್ಮಮದ್ ಅಯಾಜೋದ್ದೀನ್‌ ಪಟೇಲ್ ಅವರ ‘ಅಯಾಜ್ ಆರ್ಟ್‌ ಗ್ಯಾಲರಿ’ಯ ಒಳಾಂಗಣದ ವರ್ಣನೆ. ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿದ್ದಂತೆ, ಇವರಿಗೆ ಹಳೆಯ, ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ. ಹಾಗೆ ಸಂಗ್ರಹಿಸಿದ ವಸ್ತುಗಳನ್ನೆಲ್ಲ ಹೀಗೆ ಒಪ್ಪವಾಗಿ ಜೋಡಿಸಿ, ಗ್ಯಾಲರಿಯ ರೂಪ ನೀಡಿದ್ದಾರೆ.

ಮೂಲತಃ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರದ ಪಟೇಲ್, ಚಿತ್ರಕಲೆಯಲ್ಲಿ ಡಿಎಂಸಿ ಡಿಪ್ಲೊಮಾ, ಕಲಬುರ್ಗಿ ವಿವಿಯಿಂದ ಬಿ.ಎಫ್‌.ಎ, ಎಂ.ಎಫ್‌.ಎ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕ. ಪ್ರವೃತ್ತಿಯಿಂದ ಚಿತ್ರಕಲಾವಿದ ಹಾಗೂ ಅಪರೂಪದ ವಸ್ತುಗಳ ಸಂಗ್ರಹಕಾರ.

ಆರ್ಟ್‌ ಗ್ಯಾಲರಿಯಲ್ಲಿ..

ಈ ಗ್ಯಾಲರಿಯಲ್ಲಿ ಶಾತವಾಹನ, ಚಾಲುಕ್ಯ, ಹೊಯ್ಸಳ, ಮೊಗಲ್‌, ಬಹಮನಿ, ರಾಷ್ಟ್ರಕೂಟ, ಕದಂಬ, ವಿಜಯನಗರ, ಬರಿದ್ ಶಾಹಿ, ಆದಿಲ್‌ ಶಾಹಿ, ಬ್ರಿಟಿಷ್ ಕಾಲದ ನಾಣ್ಯಗಳು, ನೋಟುಗಳಿವೆ. ಅಷ್ಟೇ ಅಲ್ಲ, ದೇಶ, ಭಾಷೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ, ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಾರೆ. ಪುರಾತನ ಕಾಲದ ಬಂಗಾರದ ನಾಣ್ಯ, ಬೆಳ್ಳಿ ನಾಣ್ಯ, ಸೀಸ, ತಾಮ್ರ, ಸತು, ಪಂಚ ಲೋಹ, ಸ್ಟೀಲ್, ನಿಕ್ಕಲ್, ಹಾಗೂ ಟೆರಾಕೋಟಾ ನಾಣ್ಯಗಳು ಗಮನ ಸೆಳೆಯುತ್ತವೆ. ಇವರ ಸಂಗ್ರಹದಲ್ಲಿರುವ ಪ್ರಥಮ ಅಲ್ಲಾವುದ್ದೀನ್ ಹಸನ್ ಬಹಮನಿ ಶಾ ಅವರ ಬಂಗಾರದ ನಾಣ್ಯ ವಿಶೇಷವಾಗಿದೆ. ಹಳ್ಳಿಗಳು, ನಗರಗಳು, ದೇಶ ವಿದೇಶಗಳನ್ನು ಸುತ್ತಾಡುತ್ತಾ, ಹಲವು ಭಾಗಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಗ್ಯಾಲರಿಯಲ್ಲಿ ಜೋಡಿಸಿದ್ದಾರೆ.

ಈ ಅಪರೂಪದ ಗ್ಯಾಲರಿಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸಂಶೋಧಕರು, ಇತಿಹಾಸ ಆಸಕ್ತರು, ವಿದ್ಯಾರ್ಥಿಗಳು, ರಾಜಕಾರಣಿಗಳು, ಅನೇಕ ಗಣ್ಯರು ಭೇಟಿ ನೀಡಿ, ಇಲ್ಲಿಂದ ಮಾಹಿತಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.

ಹಿರಿಯರಿಂದ ಬಂದ ಬಳುವಳಿ

‘ಇಷ್ಟು ವಸ್ತುಗಳ ಸಂಗ್ರಹ, ಒಬ್ಬ ವ್ಯಕ್ತಿಯಿಂದ ಹೇಗೆ ಸಾಧ್ಯ’ ಎನ್ನಿಸುವುದು ಸಹಜ. ಇದು ಅವರಿಗೆ ಹಿರಿಯರಿಂದ ಬಂದ ಬಳುವಳಿ. ಅಯಾಜೋದ್ದೀನ್ ತಾಯಿ ಭಾನು ಬೀ ಅವರು ನೈಸರ್ಗಿಕ ಹಾಗೂ ಪ್ರಾಕೃತಿಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ಅದೇ ಹವ್ಯಾಸವನ್ನು ಮಗ ಮುಂದುವರಿಸಿದ್ದಾರೆ.

ತಂದೆ ಮಹ್ಮಮದ ಖಾಜಾ ನವೀದ್ ಪಟೇಲ್. ಇವರು ನಿಜಾಮರ ಆಡಳಿತದಲ್ಲಿ ಉರ್ದು, ಪರ್ಷಿಯನ್‌, ಕನ್ನಡ ಭಾಷೆಗಳನ್ನು ಕಲಿಸುವ ಶಿಕ್ಷಕರಾಗಿದ್ದರು. ನಿಜಾಮ್ ಸರ್ಕಾರದ ನಂತರ ಮೈಸೂರು ಸರ್ಕಾರ, ಕರ್ನಾಟಕ ಸರ್ಕಾರದ ಶಿಕ್ಷಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ವಸ್ತುಗಳ ಬಗೆಗಿನ ಪ್ರೀತಿ ಎನ್ನುವುದು ಹಿರಿಯರಿಂದ ಬಂದ ಬಳುವಳಿಯಾಗಿದೆ.

ಶಿಕ್ಷಕರಿಗೆ, ಮಕ್ಕಳಿಗೆ ಅರಿವು

ಗ್ಯಾಲರಿ, ಫೋಟೊಗ್ರಫಿಯಂತಹ ಹವ್ಯಾಸದ ಜತೆಗೆ, ಅಯಾಜೋದ್ದೀನ್‌, ಬಿಡುವಿನ ವೇಳೆಯಲ್ಲಿ ಶಾಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪುರಾತತ್ವ, ಇತಿಹಾಸ ಕುರಿತು ಮಾಹಿತಿ ನೀಡುತ್ತಾರೆ. ಅಜೀಜ್‌ ಪ್ರೇಮ್‌ಜಿ ಫೌಂಡೇಷನ್‌ ಮೂಲಕ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತೆರೆ ಮರೆಯಲ್ಲಿರುವ, ಬೆಳಕಿಗೆ ಬಾರದ ಐತಿಹಾಸಿಕ ಸ್ಥಳಗಳ ಕುರಿತು ಸಾರ್ವಜನಿಕರಿಗೆ ತಿಳಿಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

ಅಯಾಜುದ್ದೀನ್ ಸಾಧನೆಗೆ ಪತ್ನಿ ಸೈಯದಾ ಇಫಲ್ ಫಾತೀಮಾ, ಮಕ್ಕಳೂ ಸಹಕಾರ ನೀಡುತ್ತಿದ್ದಾರೆ. ಇವರ ಗ್ಯಾಲರಿ ಹಾಗೂ ಚಿತ್ರಕಲೆ ಬಗ್ಗೆ ಕೆಲವು ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಹಲವು ಪುಸ್ತಕಗಳನ್ನು ಹೊರ ತಂದಿದ್ದಾರೆ. ಜತೆಗೆ, ಮಾನ್ಯುಮೆಂಟ್ಸ್‌ ಆಫ್ ಗುಲಬರ್ಗ ಹಾಗೂ ಐತಿಹಾಸಿಕ ಸ್ಥಳಗಳ ಕುರಿತು ಕೈಪಿಡಿ ಸಂಕ್ಷಿಪ್ತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಯಾಜೋದ್ದೀನ್‌
ಸಂಪರ್ಕಕ್ಕೆ: 9448902617

ಅಂತರರಾಷ್ಟ್ರೀಯ ಪ್ರದರ್ಶನ

ಛಾಯಾಗ್ರಾಹಕ, ಚಿತ್ರಕಲಾವಿದರಾಗಿರುವ ಅವರು ಅಮೆರಿಕ, ಲಂಡನ್, ಪ್ಯಾರಿಸ್, ಯುರೋಪ್, ಗ್ರೀಸ್, ಟರ್ಕಿ, ಭೂತಾನ್, ಬಾಂಗ್ಲಾದೇಶ, ದುಬೈ, ಶ್ರೀಲಂಕಾ ಸೇರಿದಂತೆ ಇಪ್ಪತ್ತಾರು ರಾಷ್ಟ್ರಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾರೆ. ಕಲಾ ಶಿಬಿರ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅಂತರರಾಷ್ಟೀಯ ಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ರಾಷ್ಟ್ರಮಟ್ಟ ಸುಮಾರು ಇಪ್ಪತ್ಮೂರು ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ.

ಪ್ರಶಸ್ತಿ–ಪುರಸ್ಕಾರಗಳು

ಶ್ರೀಲಂಕಾದ ಷೋರಾಂಗ್ ಆರ್ಟ್ ಗ್ರೂಪ್ ಆಯೋಜಿಸಿದ್ದ 2018 ನೇ ಸಾಲಿನ ಮೂರನೇ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಇವರ ಕಲಾಕೃತಿಗೆ ಉತ್ತಮ ಕಲಾಕೃತಿ ಪ್ರಶಸ್ತಿ ಬಂದಿದೆ. 2014ನೇ ಸಾಲಿನ ಕೇಂದ್ರ ಲಲಿತಕಲಾ ಅಕಾಡೆಮಿಯ, 55ನೇ ರಾಷ್ಟ್ರೀಯ ಪುರಸ್ಕಾರ, 1990 ಹಾಗೂ 2015ರಲ್ಲಿ ನಾಗಪುರ ಪ್ರಶಸ್ತಿ, 2016 ರಲ್ಲಿ ಮುಂಬೈನ ಪ್ರಫುಲ್ಲಾ ಧನುಕರ ಪ್ರಶಸ್ತಿ. 2017 ನೇ ಸಾಲಿನ ಇಂಡಿಯನ್ ಐಕಾನಿಕ್ ಪರ್ನಾಸಲಿಟ್ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕೊಡಮಾಡುವ 2012 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, 2016-17 ನೇ ಸಾಲಿನ ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಹಿರಿಯ ಫೆಲೊಶಿಪ್, 2016ನೇ ಸಾಲಿನ ಕರ್ನಾಟಕ ಲಲಿತ ಕಲಾ ಅಕಾಡೆಮಿ ಫೆಲೊಶಿಪ್, ಜೊತೆಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT