ಮಂಡ್ಯ: ದಾಖಲೆ ನಿರ್ಮಾಣಕ್ಕಾಗಿ ಎತ್ತಿನಗಾಡಿಗೆ 15 ಟನ್ ಕಬ್ಬು ತುಂಬಿ, ಎಳೆಸಿ ಜೋಡೆತ್ತುಗಳಿಗೆ ಹಿಂಸಿಸಿದ ಆರೋಪದ ಮೇಲೆ ತಾಲ್ಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಯುವಕರ ವಿರುದ್ಧ ಸೋಮವಾರ ಕೆರಗೋಡು ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದ್ದಾರೆ.
ಎಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯರ ಬಳಗದ ಯುವಕರು ಸವಾಲು ಪೂರ್ಣಗೊಳಿಸುವುದಕ್ಕಾಗಿ ಎತ್ತಿನ ಗಾಡಿಗೆ 14.55 ಟನ್ ಕಬ್ಬು ತುಂಬಿ ಮೂರು ಕಿ.ಮೀ.ವರೆಗೆ ಎಳೆಸಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪರಿಣಾಮ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಎತ್ತುಗಳಿಗೆ ಹಿಂಸಿಸಿದ ಯುವಕರ ಮೇಲೆ ಪ್ರಕರಣ ದಾಖಲು ಮಾಡುವ ಒತ್ತಾಯ ಕೇಳಿಬಂದಿತ್ತು.
ದಾಖಲೆ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದ ಯುವಕ ಚಿರಂತ್ ಹಾಗೂ ಇತರರ ವಿರುದ್ಧ ಕೆರಗೋಡು ಠಾಣೆ ಪೊಲೀಸರು ಪಾಣಿ ಹಿಂಸೆ ತಡೆ ಕಾಯ್ದೆ (ಪಿಸಿಎ) ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ.