ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನೆಯವರೇ ಹಾವು, ಚೇಳಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಮುಖ್ಯಮಂತ್ರಿಗಳು ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಯಡಿಯೂರಪ್ಪನವರ ಹೆಸರು ಕೆಡಿಸುತ್ತಿರುವವರು ಅವರ ಪರಿವಾರದವರೇ ಹೊರತು ಹೊರಗಿನವರಲ್ಲ’ ಎಂದರು.
‘ವಿಜಯೇಂದ್ರನ ಕೈಕಾಲು ಒತ್ತುವವರಿಗೆ, ರಾತ್ರಿ ವ್ಯವಸ್ಥೆ ಮಾಡುವ ಚೇಲಾಗಳಿಗೆ ನಿಗಮ, ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.
‘ಪಾಪ, ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರಿಗೆ ಏನೂ ತಿಳಿಯತ್ತಿಲ್ಲ. ವಿಜಯೇಂದ್ರ ಮತ್ತು ಕುಟುಂಬದವರು ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಕುಳಿತುವರ್ಗಾವಣೆ ದಂದೆ, ವಸೂಲಿ ಕೆಲಸ ಮಾಡುವ ಮೂಲಕ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
ಯಡಿಯೂರಪ್ಪ ಕುಟುಂಬ ಇತ್ತೀಚೆಗೆ ಮಾರಿಷಸ್ಗೆ ವಿಶೇಷ ವಿಮಾನ ತೆಗೆದುಕೊಂಡು ಹೋಗಿದ್ದು ಏಕೆ? ಅಲ್ಲಿ ಇವರದೇನು ಹಣದ ವ್ಯವಹಾರ ನಡೆಯುತ್ತಿದೆ? ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಾಗಿದೆ ಎಂದು ಹೇಳಿದರು.
‘ತಮಗೆ ಬೇಡವಾದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರ ಬಳಿ ನಕಲಿ ಫೇಸ್ಬುಕ್ ಅಕೌಂಟ್, ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇದೆ’ ಎಂದು ದೂರಿದರು.
ಶಾಸಕ ಯತ್ನಾಳ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ತಿಂಗಳ ಹಿಂದೆ ಹಿಂಪಡೆದಿದ್ದಸರ್ಕಾರ, ಇದೀಗ ಮರಳಿ ಭದ್ರತೆಯನ್ನು ಕಲ್ಪಿಸಿದೆ.
‘ನನಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸರು ಭದ್ರತೆಯನ್ನು ನೀಡಿದ್ದರು. ಆದರೆ, ದುರುದ್ದೇಶದಿಂದ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಆದರೆ, ವಾಸ್ತವದ ಅರಿವಿರುವುದರಿಂದ ಪೊಲೀಸರು ಯಾರ ಮಾತನ್ನು ಕೇಳದೇ ಮರಳಿ ಭದ್ರತೆ ಕಲ್ಪಿಸಿದ್ದಾರೆ’ ಎಂದು ಯತ್ನಾಳ ಹೇಳಿದರು.