ಬೆಂಗಳೂರು: ಭಾರತ್ ಜೋಡೊ ಪಾದಯಾತ್ರೆ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ನಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ವೀರ ಸಾವರ್ಕರ್ ಭಾವಚಿತ್ರ ಕಾಣಿಸಿಕೊಂಡಿರುವುದು ಕಾಂಗ್ರೆಸ್ –ಬಿಜೆಪಿ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಫ್ಲೆಕ್ಸ್ನಲ್ಲಿ ಸಾವರ್ಕರ್ ಚಿತ್ರ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
‘ಬಿಜೆಪಿಯ ‘ಡರ್ಟಿ ಟ್ರಿಕ್ಸ್ ಡಿಪಾರ್ಟ್ಮೆಂಟ್’ ಕಾಂಗ್ರೆಸ್ ಶಾಸಕರ ಹೆಸರಲ್ಲಿ ಫೇಕ್ ಪೋಸ್ಟರ್ ತಯಾರಿಸಿತ್ತು. ಈ ಕುರಿತು ಕಾಂಗ್ರೆಸ್ ಪಕ್ಷವು ತಕ್ಷಣವೇ ಪೊಲೀಸ್ ದೂರನ್ನೂ ದಾಖಲಿಸಿದೆ. ಆದರೆ ಈ ಮಾಹಿತಿಯನ್ನು ನಿಮಗೆ ತಿಳಿಸಲು ಡಿಜಿಟಲ್ ಇಂಡಿಯಾದ ದ್ಯೋತಕದಂತಿರಬೇಕಿದ್ದ ರಾಜ್ಯದಲ್ಲಿನ ನೆಟ್ವರ್ಕ್ ಸಮಸ್ಯೆಯಿಂದ ತಡವಾಗಿದೆ’ ಎಂದು ಜೈರಾಮ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ “ಡರ್ಟಿ ಟ್ರಿಕ್ಸ್ ಡಿಪಾರ್ಟ್ ಮೆಂಟ್” ಕಾಂಗ್ರೆಸ್ ಶಾಸಕರ ಹೆಸರಲ್ಲಿ ಫೇಕ್ ಪೋಸ್ಟರ್ ತಯಾರಿಸಿತ್ತು.
— Jairam Ramesh (@Jairam_Ramesh) October 7, 2022
ಈ ಕುರಿತು ಕಾಂಗ್ರೆಸ್ ಪಕ್ಷವು ತಕ್ಷಣವೇ ಪೊಲೀಸ್ ದೂರನ್ನೂ ದಾಖಲಿಸಿದೆ.
ಆದರೆ ಈ ಮಾಹಿತಿಯನ್ನು ನಿಮಗೆ ತಿಳಿಸಲು ಡಿಜಿಟಲ್ ಇಂಡಿಯಾದ ದ್ಯೋತಕದಂತಿರಬೇಕಿದ್ದ ರಾಜ್ಯದಲ್ಲಿನ ನೆಟ್ವರ್ಕ್ ಸಮಸ್ಯೆಯಿಂದ ತಡವಾಗಿದೆ! pic.twitter.com/lmfGe0d6Md
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಚೀಣ್ಯ ಗ್ರಾಮದ ಬಳಿ ಹಾಕಲಾಗಿದ್ದ ಫ್ಲೆಕ್ಸ್ನಲ್ಲಿ ಬೆಂಗಳೂರು ಶಾಂತಿನಗರ ಶಾಸಕ ಹ್ಯಾರಿಸ್ ಕಡೆಯವರು ಹಾಕಿಸಿದ್ದ ಫ್ಲೆಕ್ಸ್ನಲ್ಲಿ ಸಾವರ್ಕರ್ ಭಾವಚಿತ್ರ ಇತ್ತು. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳಿದ್ದವು. ನಡುವೆ ದೊಡ್ಡದಾಗಿ ವಿ.ಡಿ.ಸಾರ್ವರ್ಕರ್ ಆಳೆತ್ತರದ ಚಿತ್ರವಿತ್ತು.
ಜೊತೆಗೆ ರಾಹುಲ್ ಗಾಂಧಿ ನಿಂತಿರುವ ಚಿತ್ರವೂ ಇತ್ತು. ಕಾಂಗ್ರೆಸ್ ಕಾರ್ಯಕರ್ತರಿಗೆ ತಪ್ಪಿನ ಅರಿವಾಗಿ ಫ್ಲೆಕ್ಸ್ ತೆರವುಗೊಳಿಸುವ ವೇಳೆಗಾಗಲೇ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
‘ಕೆಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಫ್ಲೆಕ್ಸ್ ಮಾಡಿಸಲಾಗಿದೆ. ಗೂಗಲ್ ಹುಡುಕಾಟದಲ್ಲಿ ಸಿಕ್ಕವರ ಚಿತ್ರಗಳನ್ನು ಬಳಸಲಾಗಿದೆ. ಫ್ಲೆಕ್ಸ್ ಮಾಡಿಸಿದವರಿಗೆ ತಿಳಿಯದೇ ಸಾವರ್ಕರ್ ಚಿತ್ರವನ್ನೂ ಫ್ಲೆಕ್ಸ್ ಮಾಡಿಸಿದ್ದಾರೆ. ಈಗ ಅದನ್ನು ತೆಗೆಯಲಾಗಿದೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.