ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ: ಗುಪ್ತಚರ ಇಲಾಖೆ ವೈಫಲ್ಯ, ಸಂದೇಹ

ಸರಣಿ ಘೇರಾವ್ ನಡೆಸುವ ಮಾಹಿತಿ ಮೊದಲೇ ಸಂಗ್ರಹಿಸುವಲ್ಲಿ ವಿಫಲ
Last Updated 19 ಆಗಸ್ಟ್ 2022, 6:33 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಭಾರಿ ಪ್ರತಿರೋಧ ಬಿಜೆಪಿ ಕಾರ್ಯಕರ್ತರಿಂದ ಎದುರಾಗಲಿದೆ ಎಂಬ ಮಾಹಿತಿ ಪೊಲೀಸರಿಗೆ ಮೊದಲೆ ಇರಲಿಲ್ಲವೇ ಎಂಬ ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಅದರಲ್ಲೂ ತಿತಿಮತಿ, ಮಡಿಕೇರಿ, ಗುಡ್ಡೆಹೊಸೂರು, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಸರಣಿ ಪ್ರತಿಭಟನೆಗಳು ನಡೆಯುವ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿತ್ತೇ ಎಂಬ ಸಂದೇಹವೂ ಕಾಡಲಾರಂಭಿಸಿದೆ.

ಅದರಲ್ಲೂ ಸಿದ್ದರಾಮಯ್ಯ ಅವರ ಕಾರಿನ ಒಳಗೆ ಸಾವರ್ಕರ್ ಅವರ ಭಾವಚಿತ್ರವನ್ನು ತಿತಿಮತಿಯಲ್ಲಿ ಎಸೆಯಲಾಯಿತು. ಅದರ ನಂತರವೂ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಬರುವುದನ್ನೂ ತಡೆಯಲಿಲ್ಲ. ಸಿದ್ದರಾಮಯ್ಯ ಅವರ ಕಾರು ಬರುವಾಗ ಕಾರ್ಯಕರ್ತರು ನುಗ್ಗದಂತೆ ಎಚ್ಚರ ವಹಿಸಲೂ ಇಲ್ಲ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ನಂತರವೂ ಗುಡ್ಡೆಹೊಸೂರು ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರತಿಭಟನೆಗಳು ನಡೆದವು. ತಿತಿಮತಿಯಲ್ಲಿ ಮೊದಲ ಪ್ರತಿಭಟನೆ ನಡೆದಾಗಲೇ ಕಾರ್ಯಕರ್ತರನ್ನು ಬಂಧಿಸಿದ್ದರೆ ಸರಣಿ ಪ್ರತಿಭಟೆಗಳು ನಡೆಯುತ್ತಿರಲಿಲ್ಲ. ಇದು ಪೊಲೀಸ್ ವೈಫಲ್ಯ ಎಂದು ಸ್ವತಃ ಸಿದ್ದರಾಮಯ್ಯ ಅವರೆ ಹೇಳುವಂತಾಯಿತು. ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ವೈಫಲ್ಯದಿಂದಲೇ ಸಿದ್ದರಾಮಯ್ಯ ಕಾರಿನ ಮೇಲೆ ಎರಡು ಕಡೆ ಮೊಟ್ಟೆ ಎಸೆತಗಳು ನಡೆದವು ಎಂಬ ಟೀಕೆ ವ್ಯಕ್ತವಾಗಿದೆ.

ಇಂದು ಪ್ರತಿಭಟನೆಗೆ ಕರೆ
ಪೊಲೀಸ್ ವೈಫಲ್ಯ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಆಗಸ್ಟ್ 19ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಕರೆ ನೀಡಿದೆ.

ಆಡಳಿತ ಪಕ್ಷವಾದ ಬಿಜೆಪಿಯ ಕೆಲವು ಸಂಘಟನೆಗಳು ಹಾಗೂ ಕಾರ್ಯಕರ್ತರು ಪ್ರಜಾಪ್ರಭುತ್ವಕ್ಕೆ ವಿರೋಧ ರೀತಿಯಲ್ಲಿ ವರ್ತಿಸಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭೇಟಿ ವೇಳೆಯಲ್ಲಿ ಅಹಿತಕರವಾದ ವಾತಾವರಣವನ್ನು ಸೃಷ್ಟಿಸಿ ಪ್ರಜಾಪ್ರಭುತ್ವಕ್ಕೆ ಅಗೌರವದಿಂದ ನಡೆದುಕೊಂಡಿದೆ ಎಂದು ಪಕ್ಷ ಖಂಡಿಸಿದೆ.

ಗೂಂಡಾ ವರ್ತನೆ
ಪೊಲೀಸರ ಎದುರೇ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಎಸ್‌ಡಿಪಿಐ ಖಂಡಿಸಿದೆ.

ಪ್ರತಿಭಟನೆ ಮಾಡಲು ಅನೇಕ ಅವಕಾಶಗಳು ಪ್ರಜಾಪ್ರಭುತ್ವದಲ್ಲಿದೆ. ಆದರೆ, ಸಿದ್ದರಾಮಯ್ಯ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆಯ ನೆಪದಲ್ಲಿ ಗೂಂಡಾ ವರ್ತನೆ ತೋರಿದೆ. ಇದು ನಿಜಕ್ಕೂ ಸರಿಯಲ್ಲ ಎಂದು ಟೀಕಿಸಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT