ಬೆಂಗಳೂರು: 'ರೈತರು, ಕನ್ನಡ ಪರ ಸಂಘಟನೆಗಳ ಮೇಲೆ ಕಾರಣ ಇಲ್ಲದೆ ಹಿಂದಿನ ಸರ್ಕಾರ ಕೇಸ್ಗಳನ್ನು ಹಾಕಿದೆ. ಅದನ್ನು ಹಿಂಪಡೆಯುವಂತೆ ಆದೇಶ ಹೊರಡಿಸಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಕೇಸ್ ವಾಪಸು ಪಡೆಯುವಂತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಪತ್ರದ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಪ್ರಕರಣ ವಾಪಸ್ ಪಡೆಯಲು ಆದೇಶ ನೀಡಲಾಗುವುದು’ ಎಂದು ತಿಳಿಸಿದರು.
ಅಪ್ಪಚ್ಚು ರಂಜನ್ ಸಚಿವ ಸ್ಥಾನ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಗೊಂದಲ ಏನೂ ಇಲ್ಲ. ಸಂಪುಟದಲ್ಲಿ ಸ್ಥಾನ ಖಾಲಿ ಇದೆ. ಅದಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು ಕೂಡ ಪಕ್ಷದಲ್ಲಿ ಹಿರಿಯರು’ ಎಂದರು.
ಮಾತಿನ ಮಧ್ಯೆ ಈಶ್ವರಪ್ಪ ಅವಾಚ್ಯ ಪದ ಬಳಸಿದ ಬಗ್ಗೆ, ‘ಪಕ್ಷದವರು, ಸಂಘಟನೆಯವರ ಕಗ್ಗೊಲೆಗಳು ಆಗಿವೆ. ಆ ನೋವಿನ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ. ಅದನ್ನು ಬೆಳೆಸುವುದು ಬೇಡ’ ಎಂದು ಸಮರ್ಥಿಸಿಕೊಂಡರು.