ಬೆಂಗಳೂರು: ಉಪ ನೋಂದಣಿ ಕಚೇರಿಗಳಲ್ಲಿ ಡಿಮಾಂಡ್ ಡ್ರಾಫ್ಟ್ (ಡಿ.ಡಿ) ಮೂಲಕ ಶುಲ್ಕ ಸ್ವೀಕೃತಿಯನ್ನು ನಿಷೇಧಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಆಗುತ್ತಿರುವ ಕಾರಣದಿಂದ ನಗದು ಮತ್ತು ಡಿ.ಡಿ ಮೂಲಕ ಶುಲ್ಕ ಪಡೆಯುವುದನ್ನು ನಿಷೇಧಿಸಲಾಗಿದೆ. ಬ್ಯಾಂಕ್ ಮೂಲಕ ಅಥವಾ ಡಿಜಿಟಲ್ ವರ್ಗಾವಣೆ ಮೂಲಕ ಹಣ ಪಾವತಿ ಕಡ್ಡಾಯಗೊಳಿಸಲಾಗಿದೆ. ನಗದು ಅಥವಾ ಡಿ.ಡಿ ಪಡೆಯುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಖಜಾನೆ ತಂತ್ರಾಂಶ ಮತ್ತು ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶಗಳನ್ನು ಜೋಡಣೆ ಮಾಡುವವರೆಗೂ ಹಣ ಪಾವತಿಯನ್ನು ಖಚಿತಪಡಿಸಿಕೊಂಡು, ಉಪ ನೋಂದಣಾಧಿಕಾರಿ ಪ್ರಮಾಣೀಕರಿಸಿದ ಬಳಿಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.