ಬೆಂಗಳೂರು: ‘ಪಾಪ... ರಮೇಶ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬೇಕು. ಅವರ ಮಾತನಾಡಿದ್ದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕಾನೂನು ಇದೆ. ಅಧಿಕಾರಿಗಳು ಇದ್ದಾರೆ. ತನಿಖೆಯೂ ನಡೆಯುತ್ತಿದೆ. ಅವರು ಎಲ್ಲ ಮಾಡುತ್ತಾರೆ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಕಾಂಗ್ರೆಸ್ ನಾಯಕಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅವರ (ರಮೇಶ ಜಾರಕಿಹೊಳಿ) ವೈಯಕ್ತಿಕ ಸಮಸ್ಯೆಯದು. ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು’ ಎಂದರು.
'ಮಹಾನಾಯಕ ನೀವೇ?' ಎಂದು ನಿಮ್ಮ ಹೆಸರು ಹೇಳಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ, ‘ಅವರು (ರಮೇಶ ಜಾರಕಿಹೊಳಿ) ಇವತ್ತೊಂದು ಮಾತನಾಡ್ತಾರೆ. ಅವರು ಏನು ಬೇಕಾದರೂ ಹೇಳಲಿ, ಅದಕ್ಕೆಲ್ಲ ಪ್ರತಿಕ್ರಿಯೆ ನೀಡಲ್ಲ. ಅವರ ಸರ್ಕಾರ ಇದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ’ ಎಂದರು.
ಯುವತಿಯ ಪೋಷಕರೂ ನಿಮ್ಮ ಹೆಸರು ಹೇಳಿದ್ದಾರಲ್ಲ, ಮಗಳ ಹೆಸರು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ ಎಂದೂ ಆರೋಪಿಸಿದ್ದಾರಲ್ಲ ಎಂದು ಕೇಳಿದಾಗ, ‘ನನಗೆ ಅದರ ಅವಶ್ಯಕತೆ ಇಲ್ಲ. ನಾನು ಆ ಯುವತಿಯನ್ನು ನಾನು ಭೇಟಿ ಮಾಡಿಲ್ಲ. ಈ ಬಗ್ಗೆ ಬೆಳಿಗ್ಗೆಯೇ ಹೇಳಿದ್ದೇನೆ’ ಎಂದರು.