ಬೆಂಗಳೂರು: ‘ಮಠಗಳಿಗೆ ಮಂಜೂರಾದ ಅನುದಾನದ ಮೊತ್ತ ಪಡೆಯಲು ಶೇ 30ರಷ್ಟು ಕಮಿಷನ್ ಕೊಡಬೇಕಿದೆ ಎಂಬ ಆರೋಪಕ್ಕೆ ಪೂರಕವಾಗಿ ದಿಂಗಾಲೇಶ್ವರ ಸ್ವಾಮೀಜಿ ದಾಖಲೆ ಒದಗಿಸಿದರೆ ತನಿಖೆಗೆ ಸಿದ್ಧ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ದಿಂಗಾಲೇಶ್ವರರು ಪರಮಪೂಜ್ಯರು, ಮಹಾತ್ಮರು, ತಪಸ್ವಿಗಳು. ಮಠಾಧೀಶರು ಹೇಳಿಕೆ ನೀಡಿದರೆ ಸಾಕಾಗುವುದಿಲ್ಲ’ ಎಂದು ಹೇಳಿದರು.
‘ಸ್ವಾಮೀಜಿಗಳು ಯಾರಿಗೆ? ಯಾವ ಉದ್ದೇಶಕ್ಕಾಗಿ? ಎಷ್ಟು ಮೊತ್ತದ ಲಂಚ ಕೊಟ್ಟಿದ್ದಾರೆ ಎಂಬುದರ ಬಗ್ಗೆ ವಿವರಗಳನ್ನು ಒದಗಿಸಲಿ. ಪ್ರಕರಣದ ಸಂಪೂರ್ಣ ಆಳಕ್ಕೆ ಇಳಿದು ತನಿಖೆ ಮಾಡಿಸಲಾಗುವುದು’ ಎಂದರು.