ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 9,265 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 8,662 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರಕ್ಕೆ ಹೋಲಿಸಿದರೆ, ಬುಧವಾರ ಈ ಸಂಖ್ಯೆಯಲ್ಲಿ ಸುಮಾರು ಎರಡು ಸಾವಿರದಷ್ಟು ಇಳಿಕೆಯಾಗಿದೆ.
ಮಂಗಳವಾರ 10,421 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದರು. ಈವರೆಗೆ ಒಟ್ಟಾರೆ 6,11,167 ಮಂದಿ ಕೋವಿಡ್ನಿಂದ ಮುಕ್ತರಾಗಿದ್ದಾರೆ. ಆದರೆ, ಅ.14ರಂದು 75 ಮಂದಿ ಅಸುನೀಗುವ ಮೂಲಕ, ಕೋವಿಡ್ನಿಂದ ಸಾವಿಗೀಡಾದವರ ಸಂಖ್ಯೆ 10,198ಕ್ಕೆ ಏರಿದೆ. ಕೋವಿಡ್ ಖಚಿತ ಪ್ರಕರಣಗಳ ಪ್ರಮಾಣ ಶೇ 8.14ರಷ್ಟಿದ್ದರೆ, ಮರಣ ಪ್ರಮಾಣ ಶೇ 0.81ರಷ್ಟಿದೆ.
ಸೋಂಕಿತರ ಸಂಖ್ಯೆ 7,35,371ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಪೈಕಿ, 1,13,987 ಮಂದಿ ಆಸ್ಪತ್ರೆಗಳಲ್ಲಿ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಹಾಗೂ ಆರೈಕೆಯಲ್ಲಿದ್ದಾರೆ. 925 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಒಟ್ಟು 1,13,771 ಮಂದಿ ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ, 39,111 ಜನರಿಗೆ ರ್ಯಾಪಿಡ್ ಆ್ಯಂಟಿಜೆನ್ಸ್ ಪರೀಕ್ಷೆ ಮಾಡಿಸಿದ್ದರೆ, 74,660 ಮಂದಿ ಆರ್ಟಿ ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ. ಈವರೆಗೆ ಒಟ್ಟು 62,50,992 ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಜಿಲ್ಲಾವಾರು ಪ್ರಕರಣ:
ಬೆಂಗಳೂರಿನಲ್ಲಿ ಹೊಸದಾಗಿ 4,574 ಮಂದಿಯಲ್ಲಿ ಸೋಂಕು ದೃಢಪಡುವುದರೊಂದಿಗೆ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 2,93,405ಕ್ಕೆ ತಲುಪಿದೆ. ಬುಧವಾರ 27 ಮಂದಿ ಸಾವಿಗೀಡಾಗಿದ್ದಾರೆ.
ಮೈಸೂರಿನಲ್ಲಿ 11, ದಕ್ಷಿಣ ಕನ್ನಡದಲ್ಲಿ 5, ತುಮಕೂರಿನಲ್ಲಿ 4, ಬಳ್ಳಾರಿ, ಧಾರವಾಡ, ಉತ್ತರ ಕನ್ನಡದಲ್ಲಿ ತಲಾ ಮೂವರು ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.