ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿ: ಸಿ.ಎಸ್‌ಗೆ ಕಾಂಗ್ರೆಸ್ ಒತ್ತಾಯ
Last Updated 18 ಜನವರಿ 2022, 17:54 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘಿಸಿರುವ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಹಾಗೂ ಅವರ ಮೇಲೆ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೇತೃತ್ವದ ನಿಯೋಗ, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರೆದಿರುವ 4 ಪುಟಗಳ ಆಗ್ರಹಪತ್ರ ಸಲ್ಲಿಸಿದೆ. ಜತೆಗೆ ಬಿಜೆಪಿ ಪ್ರತಿನಿಧಿಸುವ ಸಚಿವರು, ನಾಯಕರು ಪಾಲ್ಗೊಂಡಿದ್ದ ಕಾರ್ಯಕ್ರಮಗಳ ವರದಿಯ ತುಣುಕುಗಳನ್ನು ಲಗತ್ತಿಸಿದೆ. ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್ ಶಂಕರ್, ಮುಖಂಡರಾದ ವಿ.ಎಸ್‌.ಉಗ್ರಪ್ಪ, ವಿಜಯ್ ಮುಳಗುಂದ ನಿಯೋಗದಲ್ಲಿದ್ದರು.

ಮನವಿಯಲ್ಲೇನಿದೆ: ರಾಜ್ಯದ ಜನರ ಒತ್ತಾಸೆಯಂತೆ ಕೆಪಿಸಿಸಿ ಮೇಕೆದಾಟು ಪಾದಯಾತ್ರೆ ಆರಂಭಿಸಿತು. ಆಗ ಕೋವಿಡ್ ನಿಯಮ ಪಾಲಿಸಿದ್ದರೂ ಪಕ್ಷದ ನಾಯಕರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಹೀಗೆ ಮಾಡುವ ಮುಖೇನ, ಕೋವಿಡ್ ಹರಡಲು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕಾರಣ ಎಂದು ಬಿಂಬಿ
ಸಲು ಬಿಜೆಪಿ ಯತ್ನಿಸುತ್ತಿದೆ. ಹಾಗಿದ್ದರೂ ನೆಲದ ಕಾನೂನಿಗೆ ಪಕ್ಷ ತಲೆ ಬಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಆದರೆ, ಬಿಜೆಪಿ ಪ್ರತಿನಿಧಿಸುವ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಮಟ್ಟದ ನಾಯಕರು ಕೋವಿಡ್ ನಿಯಮ ಉಲ್ಲಂಘಿಸಿ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಯಾವುದೇ ಅನುಮತಿ ಪಡೆಯದೇ ಮಾಡಿದ್ದಾರೆ. ಸರ್ಕಾರಕ್ಕೆ ಜನರ ಆರೋಗ್ಯ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಅವರೆಲ್ಲರ ವಿರುದ್ಧವೂ ಕೂಡಲೇ ಕ್ರಮ ಜರುಗಿಸಬೇಕು. ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ವಿಧಾನಪರಿಷತ್ತಿನ ಸದಸ್ಯರ ಪ್ರಮಾಣ ವಚನ ಸಮಾರಂಭ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳು ಅಮಾವಾಸ್ಯೆ ಜಾತ್ರೆ ಕಾರ್ಯಕ್ರಮ,ಬಿಜೆಪಿ ನಾಯಕ ಜನಾರ್ದನರೆಡ್ಡಿ ಅವರು ಬಳ್ಳಾರಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದ ಕಾರ್ಯಕ್ರಮ,ಬಿಜೆಪಿ ಶಾಸಕ ಹರೀಶ್ ಪೂಂಜಾ
ಅವರು ಪ್ರಧಾನಿ ಮೋದಿ ಅವರ ಆರೋಗ್ಯ–ಆಯಸ್ಸು ವೃದ್ಧಿಗಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ 150 ಅರ್ಚಕರನ್ನು ಕರೆಸಿ ಮೃತ್ಯುಂಜಯ ಹೋಮ ಮಾಡಿಸಿದ್ದದನ್ನು ಉಲ್ಲೇಖಿಸಲಾಗಿದೆ.

ಬಿಜೆಪಿ ಶಾಸಕರಾದ ರೇಣುಕಾಚಾರ್ಯ, ಅನಿಲ್ ಬೆನಕೆ, ಎಸ್‌.ವಿ. ರಾಮಚಂದ್ರ, ಎಸ್.ಆರ್. ವಿಶ್ವನಾಥ್‌, ಸುಭಾಷ್ ಗುತ್ತೇದಾರ್‌ ಅವರು ವಿವಿಧ ಕಾರ್ಯಕ್ರಮ ನಡೆಸಿ, ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದೂ ವಿವರಿಸಿದೆ.

ಸುಮ್ಮನೆ ಕೂರುವುದಿಲ್ಲ: ಡಿಕೆಶಿ

‘ಕೋವಿಡ್ ನಿಯಮ ಉಲ್ಲಂಘಿಸಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಮುಖ್ಯಮಂತ್ರಿ ಮನೆಗೂ ಹೋಗುತ್ತೇವೆ. ನಾವು ಏನು ಮಾಡುತ್ತೇವೆ ಎಂದು ಈಗ ಹೇಳುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಫಿ–ಟೀ ಕುಡಿದು ನೆಂಟಸ್ತಿಕೆ ಮಾಡಲು ಅವರ ಮನೆಗೆ ಹೋಗುವುದಿಲ್ಲ.ಸಿದ್ದರಾಮಯ್ಯ ಅವರು ಮೈಸೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ಏನು ಮಾಡುತ್ತೇವೆ ಎಂಬುದನ್ನು ಕಾದು ನೋಡಿ. ನಾವು ಸುಮ್ಮನೆ ಕೂರುವುದಿಲ್ಲ’ ಎಂದರು.

‘ಮೇಕೆದಾಟು ಯೋಜನೆಯಿಂದ ರೈತರಿಗೆ ನೀರು ನೀಡುತ್ತೇವೆ ಎಂಬ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ’ ಎಂದು ಸಚಿವ ಆರ್.ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ನಾನು ಅವರಷ್ಟು ಅತಿ ಬುದ್ಧಿವಂತ ಅಲ್ಲ. ನನಗೂ ರಾಜಕೀಯ, ಕಾನೂನು ಗೊತ್ತಿದೆ. ಕೋವಿಡ್‌ನಿಂದ ವಿಶ್ರಾಂತಿ ಪಡೆಯುತ್ತಿದ್ದ ಅವರು ಇನ್ನಷ್ಟು ದಿನ ವಿಶ್ರಾಂತಿ ಪಡೆಯಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT