ರಾಮನಗರದ ಹರೀಶ್ ಎಂಬುವರು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಬೆಂಗಳೂರಿನಿಂದ ಕಾರ್ಮಿಕರನ್ನು ಕರೆತಂದಿದ್ದರು. ಮ್ಯಾನ್ಹೋಲ್ಗೆ ಏಕಾಏಕಿ ಕಾರ್ಮಿಕರನ್ನು ಇಳಿಸಿದ್ದು, ಒಳಗೆ ಆಮ್ಲಜನಕ ಇದೆಯೋ ಇಲ್ಲವೋ ಎಂದು ಕೂಡ ಪರೀಕ್ಷಿಸಿಕೊಂಡಿರಲಿಲ್ಲ. ಕೆಲಸ ಮಾಡುವವರಿಗೆ ಸುರಕ್ಷಾ ಸಾಧನಗಳನ್ನೂ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಗುತ್ತಿಗೆದಾರ ಹರೀಶ್ ಹಾಗೂ ಅವರ ಸಹಾಯಕ ಮನೋಜ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 'ಪ್ರಕರಣದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಯಾವುದೇ ಸುರಕ್ಷತಾ ನಿಯಮ ಅನುಸರಿಸದೇ ಕಾಮಗಾರಿ ನಡೆಸಿದ್ದು, ಕಾರ್ಮಿಕರನ್ನು ಮ್ಯಾನ್ಹೋಲ್ಗೆ ಇಳಿಸಿದ್ದಾರೆ. ಅವರ ವಿರುದ್ಧ ಮ್ಯಾನುಯೆಲ್ ಸ್ಕ್ಯಾವೆಂಜರ್ ಕಾಯ್ದೆಯೂ ಸೇರಿದಂತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದರು.