ಮಂಡ್ಯ: ‘ಕಾಂಗ್ರೆಸ್ ಮುಖಂಡರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದರಿಂದ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್ಗೆ ಜಾಸ್ತಿ ಹಕ್ಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ಕಾಂಗ್ರೆಸ್ ಮೊದಲು ಘೋಷಿಸಿತ್ತು. ನಂತರ ಬಿಜೆಪಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಘೋಷಿಸಿದೆ. ₹25ಕ್ಕೆ ಬಾವುಟ ಖರೀದಿಸಿ ಮನೆ ಮೇಲೆ ಹಾರಿಸಲು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಉಚಿತವಾಗಿಯೇ ವಿತರಿಸಬಹುದಿತ್ತು’ ಎಂದರು.
‘ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಕಾಂಗ್ರೆಸ್ ಸುಮ್ಮನೇ ಟ್ವೀಟ್ ಮಾಡಿಲ್ಲ. ನಾಲ್ಕು ತಿಂಗಳಿಂದ ಬಿಜೆಪಿ ಮಂತ್ರಿಗಳೇ ಸಿ.ಎಂ ಬದಲಾವಣೆ ವಿಚಾರ ಮಾತನಾಡುತ್ತಿದ್ದಾರೆ. ಅವರ ಮಾತುಗಳನ್ನು ಗಮನಿಸಿ ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಟ್ವೀಟ್ ಮಾಡಿದ್ದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದರು.
‘ಎಚ್.ಡಿ.ಕುಮಾರಸ್ವಾಮಿಗೆ ಕೈಕೊಟ್ಟ ರೀತಿಯಲ್ಲಿ ಸಿದ್ದರಾಮಯ್ಯಗೂ ಡಿಕೆಶಿ ಕೈಕೊಡುತ್ತಾರೆ’ ಎಂಬ ಕಂದಾಯ ಸಚಿವ ಆರ್.ಅಶೋಕ ಹೇಳಿಕೆಗೆ ಪ್ರತಿ ಕ್ರಿಯಿಸಿ, ‘ರಾಜಕೀಯ ನಿಂತ ನೀರಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷ ಬಿಜೆಪಿ ಜೊತೆ ಸೇರಿ ಚುನಾವಣೆ ನಡೆ ಸಿತ್ತು. ಆದರೆ ಕಾಂಗ್ರೆಸ್, ಎನ್ಸಿಪಿ ಜೊತೆ ಸರ್ಕಾರ ರಚಿಸಿತ್ತು. ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿ ಜೊತೆ ಸರ್ಕಾರ ಮಾಡಿದ್ದರು. ಈಗ ಬಿಜೆಪಿ ಜೊತೆಗಿನ ಸಖ್ಯ ತ್ಯಜಿಸಿದ್ದಾರೆ. ಯಾರ ಮಾತಿಗೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ’ ಎಂದರು.