ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆಗೊಳಗಾದ ಅಪರಾಧಿಗಳ ಬೆರಳಚ್ಚು, ರಕ್ತ, ಡಿಎನ್‌ಎ ಮಾದರಿ ಸಂಗ್ರಹ: ಆರಗ

Last Updated 17 ಸೆಪ್ಟೆಂಬರ್ 2021, 13:40 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ಅಪರಾಧಿಗಳ ಬೆರಳಚ್ಚು, ಪಾದದ ಗುರುತಿನ ಜತೆಗೆ ರಕ್ತ, ಡಿಎನ್‌ಎ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯನ್ನು ಸಂಗ್ರಹಿಸಲಾಗುತ್ತದೆ. ಆದರೆ, ವಿಚಾರಣಾಧೀನ ಕೈದಿಗಳಿಂದ ಇವುಗಳನ್ನು ಪಡೆಯುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದರು.

ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ಮಸೂದೆಯ ಕುರಿತು ಸ್ಪಷ್ಟನೆ ನೀಡಿದ ಅವರು, ಶಿಕ್ಷೆಗೆ ಒಳಪಡದ ವಿಚಾರಣಾಧೀನ ಕೈದಿಗಳಿಂದ ಮಾದರಿ ಸಂಗ್ರಹಿಸುವುದಿಲ್ಲ ಎಂದರು.

ಈ ಮಾದರಿಗಳನ್ನು ಪಡೆಯುವ ಅಧಿಕಾರವನ್ನು ಜಿಲ್ಲಾ ಮಟ್ಟದಲ್ಲಿ ಎಸ್ಪಿಗಳಿಗೆ, ಬೆಂಗಳೂರು ನಗರದಲ್ಲಿ ಡಿಸಿಪಿಗಳಿಗೆ ನೀಡಲಾಗಿದೆ. ಅಪರಾಧಿಗಳಿಂದ ಸಂಗ್ರಹಿಸಿದ ಮಾದರಿಯನ್ನು ಬೆಂಗಳೂರಿನ ಕ್ರೈಂ ಟ್ರ್ಯಾಕಿಂಗ್‌ ಸಿಸ್ಟಂ ವಿಭಾಗದಲ್ಲಿ ಸಂಗ್ರಹಿಸಿಡಲಾಗುತ್ತದೆ. 10 ವರ್ಷಗಳ ಬಳಿಕ ಅವುಗಳನ್ನು ನಾಶ ಪಡಿಸಲಾಗುತ್ತದೆ ಎಂದು ಜ್ಞಾನೇಂದ್ರ ತಿಳಿಸಿದರು.

ಸೆಷನ್‌ ನ್ಯಾಯಾಲಯದ ವಿಚಾರಣೆ ಆನ್‌ಲೈನ್:

ಸೆಷನ್ಸ್‌ ನ್ಯಾಯಾಲಯದ ವಿಚಾರಣೆಗಳನ್ನೂ ಆನ್‌ಲೈನ್‌ ಮೂಲಕ ನಡೆಸಲು ಸಹಾಯಕವಾಗುವ ‘ದಂಡ ಪ್ರಕ್ರಿಯಾ ಸಂಹಿತೆ ಮಸೂದೆ’ಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಇಬ್ಬರು ವಕೀಲರ ಸಮ್ಮುಖದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಯ ವಿಚಾರಣೆ ನಡೆಸಲಾಗುವುದು. ಇದರಿಂದ ಹಣ, ಸಮಯ, ಉಳಿತಾಯವಾಗುತ್ತದೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಹೋಗುವುದು ತಪ್ಪುತ್ತದೆ ಎಂದು ಹೇಳಿದರು.

ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧ ಮಸೂದೆ ಮಂಡನೆ

ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸುವ ಪ್ರತಿಬಂಧಕ ಕಾಯ್ದೆಯ ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ಆನ್‌ಲೈನ್‌ ಜೂಜು ನಿಷೇಧದ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಈ ಮಸೂದೆಯು ಲಾಟರಿ, ಕುದುರೆ ರೇಸ್‌ಗಳಿಗೆ ಅನ್ವಯವಾಗುವುದಿಲ್ಲ. ಮೊಬೈಲ್‌, ಕಂಪ್ಯೂಟರ್‌ ಮತ್ತಿತರ ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ಗಳಿಗೆ ಅನ್ವಯವಾಗಲಿದೆ ಎಂದರು.

ಕಾನೂನು ಉಲ್ಲಂಘಿಸಿ ಆನ್‌ಲೈನ್‌ ಜೂಜಿನಲ್ಲಿ ತೊಡಗುವವರು, ಅವರಿಗೆ ಸಹಾಯ ಮಾಡುವವರು ಮತ್ತು ಆಶ್ರಯ ನೀಡುವವರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT