ಹೊಸಪೇಟೆ: ತಾಲ್ಲೂಕಿನ ಗಾದಿಗನೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಬುಧವಾರ ಸಾವನ್ನಪ್ಪಿದ್ದಾರೆ. ನಂಜುಂಡೇಶ್ವರ (32), ಅವರ ಪತ್ನಿ ಪಾರ್ವತಿ (27), ಮೂರು ವರ್ಷದ ಮಗಳು ಗೌತಮಿ, ಎರಡು ವರ್ಷದ ಮಗ ಸ್ವರೂಪ್ ಮೃತರು.
‘ಜೆಎಸ್ಡಬ್ಲ್ಯೂ ಕಂಪನಿಯ ನೌಕರ ನಂಜುಂಡೇಶ್ವರ ಹಾಗೂ ಅವರ ಪತ್ನಿ ಮಕ್ಕಳಿಗೆ ವಿಷ ಕೊಟ್ಟಿದ್ದಾರೆ. ಬಳಿಕ ಇಬ್ಬರೂ ನೇಣಿಗೆ ಶರಣಾಗಿ ಜೀವ ಬಿಟ್ಟಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣರು. ಸ್ವಯಂಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿಟ್ಟು ಜೀವ ತ್ಯಜಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ನಂಜುಂಡೇಶ್ವರ ಬಹಳ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲಾಗದೆ ಹೀಗೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪೊಲೀಸರ ತನಿಖೆ ಮುಗಿದ ನಂತರ ಸತ್ಯಾಂಶ ಹೊರಬರಲಿದೆ. ಸ್ಥಳಕ್ಕೆ ಗಾದಿಗನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.