ಬೆಂಗಳೂರು: ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು 'ಗುಜರಾತ್ ಮಾಡೆಲ್' ನೋಡುವುದಕ್ಕೆ ಅಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ಮಾಧ್ಯಮದಲ್ಲಿ ಗಮನಿಸಿದೆ. ನಮ್ಮ ರಾಜ್ಯದ ತೆರಿಗೆ ದುಡ್ಡನ್ನು ಅನ್ಯ ರಾಜ್ಯದ ಮಾಡೆಲ್ ನೋಡುವುದಕ್ಕೆ ಅನಗತ್ಯವಾಗಿ ಖರ್ಚು ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಗುಜರಾತ್ನಲ್ಲಿ 2008ರಲ್ಲಿ ನರೇಂದ್ರ ಮೋದಿ ಅವರು ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಒಂದು ಡೊಲೆರಾ ಗಿಫ್ಟ್ ಸಿಟಿಯನ್ನೋ, ಸ್ಮಾರ್ಟ್ ಸಿಟಿಯನ್ನೋ ಮಾಡುತ್ತೀನಿ ಅಂತ ಹೇಳಿದ್ದರು. ಅದರ ಒಂದು ತ್ರಿಡಿ ವಿಡಿಯೋ ಮಾಡಿ ಚುನಾವಣೆ ವೇಳೆ ದೊಡ್ಡ ಮಟ್ಟದ ಪ್ರಚಾರ ಮಾಡಿದ್ದರು. ಮಾಧ್ಯಮಗಳುದೇಶದಲ್ಲೇ ಇದೊಂದು ಕ್ರಾಂತಿ ಎಂಬಷ್ಟರ ಮಟ್ಟಿಗೆ ಯೋಜನೆಗೆ ಪ್ರಚಾರ ನೀಡಿದ್ದವು.
ಈಗ ಡೊಲೆರಾ ಸಿಟಿಯ ಕಾಮಗಾರಿ ಸಾಗುತ್ತಿರುವುದನ್ನು ಗಮನಿಸಿದರೆ ಇನ್ನೂ ನೂರು ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದೆನಿಸುತ್ತದೆ. ತ್ರಿಡಿಯಲ್ಲಿ ಇಂದ್ರ ಲೋಕವನ್ನೇ ಸೃಷ್ಟಿಸಿದ್ದಾರೆ. ಈಗ 12 ವರ್ಷದ ನಂತರ ನೋಡಿದರೆ ನಿಮಗೆ ಸತ್ಯಾಂಶ ಗೊತ್ತಾಗುತ್ತದೆ. ಅದನ್ನು ನೋಡಲು ಅಲ್ಲಿವರೆಗೆ ಹೋಗಬೇಕಿಲ್ಲ. ಇಲ್ಲಿಯೇ ಕುಳಿತು ಯೂಟ್ಯೂಬ್ನಲ್ಲಿ ನೋಡಬಹುದು. ಅಲ್ಲೆಲ್ಲೋ ಡೊಲೆರಾ ಸಿಟಿಯನ್ನು ನೋಡಿ ನಮ್ಮ ರಾಜ್ಯವನ್ನು ಕಟ್ಟುವಂತ ಅಗತ್ಯವಿಲ್ಲ. ಡೊಲೆರಾ ಸಿಟಿಯ ಅವಶ್ಯಕತೆ ನಮಗಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ಅಭಿಪ್ರಾಯದ ಪ್ರಕಾರ ಉತ್ತರ ಪ್ರದೇಶ ಚುನಾವಣೆ ಇರುವುದರಿಂದ ಈಗ ಅಯೋಧ್ಯೆ ಸಿಟಿಯ ಅಭಿವೃದ್ಧಿ ಬಗ್ಗೆ ತ್ರಿಡಿಯಲ್ಲಿ ತೋರಿಸುತ್ತಿದ್ದಾರೆ. ತ್ರಿಡಿಯಲ್ಲಿ ಏನು ಬೇಕಿದ್ದರೂ ತೋರಿಸಬಹುದು ಎಂದು ಕುಮಾರಸ್ವಾಮಿ ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.