ಹುಬ್ಬಳ್ಳಿ: ಬೆಳಗಾವಿ, ವಿಜಯಪುರ, ಗದಗ, ಉತ್ತರ ಕನ್ನಡ, ಹಾವೇರಿ, ಹುಬ್ಬಳ್ಳಿಯಲ್ಲಿ ಭಾನುವಾರ ಗುಡುಗು ಸಹಿತ ಮಳೆಯಾಗಿದೆ.
ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಆಲಿಕಲ್ಲು ಮಳೆ ಬಿರುಗಾಳಿಗೆ ಅಲ್ಲಿನ ಕಳ್ಳಕವಟಗಿ ಗ್ರಾಮದ ಶಿವಾನಂದ ಗಿಡ್ನವರ ಹಾಗೂ ಪರಮೇಶ್ವರ ಗಿಡ್ನವರ್ ಸಹೋದರರ, ಮಾರುಕಟ್ಟೆಗೆ ಕಳಿಸುವ ಹಂತದಲ್ಲಿರುವ 6 ಟನ್ ಒಣದ್ರಾಕ್ಷಿ ಹಾನಿಗೊಳಗಾಗಿದೆ.
ಉಳಿದಂತೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು, ಗಾಳಿಯೊಂದಿಗೆ ತುಂತುರು ಮಳೆಯಾಗಿದೆ.
ಬೆಳಗಾವಿ ನಗರ, ಕಿತ್ತೂರು ಮತ್ತು ಸವದತ್ತಿ ಭಾಗದಲ್ಲಿ ಸಂಜೆ ಜೋರು ಗಾಳಿ ಮತ್ತು ಗುಡುಗು ಸಮೇತ ಸಾಧಾರಣ ಮಳೆಯಾಯಿತು. ಗದಗ ತಾಲ್ಲೂಕಿನ ವಿವಿಧೆಡೆ ಗಾಳಿ, ಗುಡುಗು ಸಹಿತ ಜೋರಾದ ಮಳೆ ಸುರಿದಿದೆ. ಹುಬ್ಬಳ್ಳಿಯಲ್ಲಿ ಸಾಯಂಕಾಲದಿಂದ ರಾತ್ರಿಯವರೆಗೂ ತುಂತುರು ಮಳೆ ಮುಂದುವರಿದಿತ್ತು.
ಕರಾವಳಿಯಲ್ಲಿ ಗಾಳಿ, ಮಳೆ: ಕರಾವಳಿಯ ಕೆಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುಡುಗು, ಸಿಡಿಲಿನೊಂದಿಗೆ ಮಳೆಯಾಗಿದೆ. ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಸುತ್ತಲಿನ ಪ್ರದೇಶಗಳು, ಕಡಬದ ಕೋಡಿಂಬಾಳದಲ್ಲಿ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ನರಸಿಂಹರಾಜಪುರದಲ್ಲಿ ಸಾಧಾರಣ ಮಳೆಯಾಗಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.14 ಮತ್ತು 15ರಂದು ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧಾರಾಕಾರ ಮಳೆ: ಕೊಡಗು ಜಿಲ್ಲೆಯ ನಾಪೋಕ್ಲು, ತಲಕಾವೇರಿ, ವಿರಾಜಪೇಟೆ, ಚೆಟ್ಟಿಮಾನಿ, ಬೆಟ್ಟಗೇರಿ ಹಾಗೂ ಶನಿವಾರಸಂತೆ ಭಾಗದಲ್ಲಿ ಭಾನುವಾರ ಸಂಜೆ ಧಾರಾಕಾರ ಮಳೆಯಾಗಿದೆ.