ಬೆಂಗಳೂರು: ‘ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂಬುದೇ ಕಾಂಗ್ರೆಸ್ ನಾಯಕರ ಕಾರ್ಯಸೂಚಿ. ಅವರಿಗೆ ಬಿಜೆಪಿಗಿಂತ ಜೆಡಿಎಸ್ ಪಕ್ಷದ ಮೇಲೆ ಹೆಚ್ಚು ಸಿಟ್ಟಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಗ್ಗೆರೆಯಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಭಯವೊ, ಆಕ್ರೋಶವೊ ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ನಮ್ಮ ಪಕ್ಷವನ್ನು ಮುಗಿಸುವ ಕಾರ್ಯಸೂಚಿಯಲ್ಲೇ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ಇಡೀ ದೇಶದಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ ಮುಖ್ಯಮಂತ್ರಿ ನಾನು ಮಾತ್ರ. ಅಂಥ ವಾತಾವರಣ ದಲ್ಲಿನಾನು ಕೆಲಸ ಮಾಡುತ್ತಿದ್ದೆ. ದೇವೇಗೌಡರ ಕುಟುಂಬವನ್ನು ಹಣ ಕೊಟ್ಟು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.
‘ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುರಿತು ಕುಮಾರಸ್ವಾಮಿ ಮೃದು ಧೋರಣೆ ತಳೆದಿದ್ದಾರೆ ಎಂಬ ಅಪಪ್ರಚಾರ ನಡೆದಿದೆ. ಪಕ್ಷ ಇಲ್ಲಿ ಪ್ರಬಲ ಸ್ಪರ್ಧೆ ನಡೆಸುತ್ತಿದೆ’ ಎಂದು ಅವರು ಹೇಳಿದರು.