ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿಗೆ ಜೆಡಿಎಸ್‌ ಹೊಣೆ: ದೇವೇಗೌಡ

‘ಜೆಡಿಎಸ್ ಮನೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ’
Last Updated 26 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಅರಮನೆ ಮೈದಾನದಲ್ಲಿ ಜ. 7ರಂದು ನಡೆಯಲಿರುವ ‍ಪಕ್ಷದ ಪ್ರಮುಖರ ಸಭೆಯಲ್ಲಿ ಭವಿಷ್ಯದ ನಡೆಯ ಬಗ್ಗೆ ತಮ್ಮ ಚಿಂತನೆಗಳನ್ನು ಎಚ್‌.ಡಿ. ಕುಮಾರಸ್ವಾಮಿ ಹಂಚಿಕೊಳ್ಳಲಿದ್ದಾರೆ. ಸಂಕ್ರಾಂತಿ (ಜ. 14) ಬಳಿಕ ಕುಮಾರಸ್ವಾಮಿ ನಿರ್ದೇಶನದಂತೆ ಪಕ್ಷ ಸಂಘಟನೆ ನಡೆಯಲಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಆ ಮೂಲಕ, ರಾಜ್ಯದಲ್ಲಿ ಜೆಡಿಎಸ್‌ ಮುನ್ನಡೆಸುವ ಜವಾಬ್ದಾರಿಯನ್ನು ಮತ್ತೆ ಕುಮಾರಸ್ವಾಮಿ ವಹಿಸಿಕೊಳ್ಳಲಿದ್ದಾರೆ ಎಂದು ಅವರು ಸೂಚ್ಯವಾಗಿ ಹೇಳಿದರು.

‘ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ನಮಗೆ ಯಾವ ಹೈಕಮಾಂಡೂ ಇಲ್ಲ. ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ. ವಯಸ್ಸಿಗೆ ತಕ್ಕಂತೆ ಕೆಲಸ ಮಾಡುತ್ತೇನೆ’ ಎಂದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜೆಡಿಎಸ್ ಮನೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ರೀತಿ ಮಾತನಾಡಿ ನಮ್ಮ ಮನೆ ಬಾಗಿಲಿಗೆ ಯಾರೆಲ್ಲ ಬಂದಿದ್ದರು ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಗುಲಾಂ ನಬಿ ಆಜಾದ್‌ ಎಲ್ಲರೂ ಬಂದಿದ್ದು ಏಕೆ?’ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

‘ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಹಾಗೆಂದು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ದೇವೇಗೌಡ, ಕುಮಾರಸ್ವಾಮಿ ಹೊರತಾಗಿಯೂ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಪಕ್ಷ ಯಾರೊಬ್ಬರನ್ನೂ ನೆಚ್ಚಿಕೊಂಡಿಲ್ಲ’ ಎಂದರು.

‘ಜೆಡಿಎಸ್‌ಗೆ ಯಾರಿಂದ ಏನೂ ಮಾಡೋಕೆ ಆಗಲ್ಲ. ಹಾಲು, ಅಕ್ಕಿ ಭಾಗ್ಯ ಹೀಗೆ ಭಾಗ್ಯಗಳನ್ನು ಕೊಟ್ಟು ಏನಾಯಿತು? ಕಾಂಗ್ರೆಸ್‌ ಸೀಟು 130 ಇದ್ದದ್ದೂ 78ಕ್ಕೆ ಏಕೆ ಬಂತು? ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ. ಒಂದು ನಗರಸಭೆ ಚುನಾವಣೆ ಗೆಲ್ಲಲೂ ಆಗಲಿಲ್ಲ’ ಎಂದೂ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ವಿಧಾನಪರಿಷತ್‌ನಲ್ಲಿ ನಡೆದ ಗದ್ದಲದ ಬಗ್ಗೆ ಮಾತನಾಡಿದ ಅವರು, ‘ಸಭಾಪತಿ ರಾಜೀನಾಮೆ ಕೊಡಲು ಸಿದ್ಧರಾಗಿದ್ದರೂ ನನ್ನನ್ನು ಪರೀಕ್ಷೆ ಮಾಡಬೇಕೆಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ತಡೆದರಂತೆ. ನನ್ನ ಜಾತ್ಯತೀತತೆ ಪರೀಕ್ಷೆ ಮಾಡಬೇಕಾ ನೀವು’ ಎಂದೂ ಪ್ರಶ್ನಿಸಿದರು.

‘ನಾನು ಇರುವಷ್ಟು ದಿನ ಮಾತ್ರ ಅಲ್ಲ. ನಾನು ಹೋದ ಮೇಲೆಯೂ ಈ ಪಕ್ಷ ಉಳಿಯಲಿದೆ. ಅದಕ್ಕಾಗಿ ನನ್ನ ಹೋರಾಟ ಇರಲಿದೆ. ಏಕ ತೀರ್ಮಾನ ಬೇಡ, ಕೋರ್ ಕಮಿಟಿ ಮಾಡಿ ಅಲ್ಲಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿಗೆ ಹೇಳಿದ್ದೇನೆ. ಶಿರಾ ಉಪ ಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ. ನಮಗೆ ಇನ್ನೂ ಕಾರ್ಯಕರ್ತರು ಇದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಇದೆ. ಹೀಗಾಗಿ ಯಾರಿಗಾದರೂ ಜವಾಬ್ದಾರಿ ಕೊಡಬೇಕಿದೆ’ ಎಂದರು.

‘ವಿಲೀನ: ಬಾಲಿಶ ಹೇಳಿಕೆ’
ಬಿಜೆಪಿ ಜತೆ ಜೆಡಿಎಸ್‌ ವಿಲೀನದ ಬಗ್ಗೆ ಸುದ್ದಿಗಾರರು ಪ್ರಶ್ನಿಸುತ್ತಿದ್ದಂತೆ ದೇವೇಗೌಡರು, ಸಿಡಿಮಿಡಿಗೊಂಡರು.

'ವಿಲೀನದ ಬಗ್ಗೆ ಯಾರಪ್ಪಾ ಆ ಜ್ಯೋತಿಷಿ ಹೇಳಿದ್ದು? ಬಾಲಿಶ ಹೇಳಿಕೆ. ಸಾಮಾನ್ಯ ಜ್ಞಾನ ಇದೆಯಾ? ನಾನು ಈ ದೇಶ ಆಳಿದವನು. ಮಾಜಿ ಪ್ರಧಾನಿ ಆಗಿದ್ದವನು, ನನ್ನ ಪಕ್ಷವನ್ನು ಅವರ ಮನೆಬಾಗಿಲಿಗೆ ಬಿಡೋದಕ್ಕೆ ಆಗುತ್ತಾ’ ಎಂದು ಅವರು ಏರಿದ ಧ್ವನಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT