ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಬಂಧಿಸಲಾಗಿರುವ ಮೊಹಮ್ಮದ್ ಜುಬೈರ್ ಅವರನ್ನು ಬೆಂಗಳೂರಿಗೆ ಗುರುವಾರ ಕರೆತಂದಿರುವ ದೆಹಲಿ ಪೊಲೀಸರು, ಕಾವಲ್ಭೈರಸಂದ್ರದಲ್ಲಿರುವ ಮನೆಯಲ್ಲಿ ಮೂರು ಗಂಟೆ ಶೋಧ ನಡೆಸಿದರು.
ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು ಇತ್ತೀಚೆಗೆ ದೆಹಲಿ ಪೊಲೀಸರು ಬಂಧಿಸಿದ್ದರು.
ಜುಬೈರ್ ಅವರು ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯ ಕಾವಲ್ ಭೈರಸಂದ್ರ ನಿವಾಸಿ. ಹೀಗಾಗಿ, ಪುರಾವೆಗಳನ್ನು ಕಲೆಹಾಕಲು ಜುಬೈರ್ ಅವರನ್ನು ದೆಹಲಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.
ಜುಬೈರ್ ಕರೆದುಕೊಂಡು ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು, ಡಿ.ಜೆ. ಹಳ್ಳಿ ಠಾಣೆಯಲ್ಲಿ ಕೆಲ ಹೊತ್ತು ಕೂರಿಸಿದ್ದರು. ನಂತರ, ಬಿಗಿ ಭದ್ರತೆಯಲ್ಲಿ ಮನೆಗೆ ಕರೆದೊಯ್ದು ಶೋಧ ನಡೆಸಿದರು.
ಮೂರು ಗಂಟೆ ಮನೆಯಲ್ಲಿದ್ದ ಪೊಲೀಸರು, ಕೆಲ ದಾಖಲೆಗಳನ್ನು ಸಂಗ್ರಹಿಸಿದರು. ನಂತರ, ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಮಹಜರು ಮಾಡಿಕೊಂಡರು. ನಂತರ, ಬಿಗಿ ಭದ್ರತೆಯಲ್ಲೇ ಜುಬೇರ್ನನ್ನು ಸ್ಥಳದಿಂದ ಕರೆದೊಯ್ದರು.
‘ಆರೋಪಿ ಜುಬೈರ್ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಂತೆ ಪುರಾವೆಗಳನ್ನು ದೆಹಲಿ ಪೊಲೀಸರು ಕಲೆಹಾಕಿದ್ದಾರೆ. ಜುಬೈರ್ ಓಡಾಡಿದ್ದ ಸ್ಥಳದಲ್ಲಿ ಮಹಜರು ಮಾಡಿಕೊಂಡು ಹೋಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.