ಬೆಂಗಳೂರು: ‘ಕನ್ನಡ ಕಂಕಣ’ವು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆಶಿಸಿದರು.
ಕನಕಪುರ ರಸ್ತೆ ಕನ್ನಡ ಬಳಗದ ವತಿಯಿಂದ ಪ್ರತಿ ತಿಂಗಳು ಆಚರಿಸುವ ‘ಕನಕಪುರ ರಸ್ತೆಯಲ್ಲಿ ಕನ್ನಡ ನಾದ’ ಕಾರ್ಯಕ್ರಮದ ಅಂಗವಾಗಿ ನಡೆದ ‘ಕನ್ನಡ ಕಂಕಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಾಧಿಕಾರದ ವತಿಯಿಂದ ಆಚರಿಸುತ್ತಿರುವ ಕನ್ನಡ ಕಾಯಕ ವರ್ಷ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಕನ್ನಡ ಪರ ಯೋಜನೆಗಳು ಪ್ರಗತಿಯಲ್ಲಿದೆ. ಇದರ ಯಶಸ್ಸಿಗೆ ಕನ್ನಡಿಗರ ಸ್ಪಂದನ ಮತ್ತು ಬದ್ಧತೆ ಅಗತ್ಯ’ ಎಂದು ಹೇಳಿದರು.
ಹಿರಿಯ ಹೋರಾಟಗಾರ ರಾ.ನಂ.ಚಂದ್ರಶೇಖರ ಮಾತನಾಡಿ, ‘ಕನ್ನಡ ಕಂಕಣ’ ಮಾದರಿಯಲ್ಲಿ ಇಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿವೆ. ‘ಉದ್ಯಾನವನದಲ್ಲಿ ಕನ್ನಡ’ ಎಂಬ ಕಾರ್ಯಕರಮವೂ ನಡೆದಿತ್ತು. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಬೇಕು ಎಂದು ಹೇಳಿದರು.
ಅಲೀಮ್, ಜ್ಞಾನ್ ಮಧು, ಲಲ್ಲೂ, ನಿಶಾ ಅವರಿಗೆ ಅಪ್ರತಿಮ ಕನ್ನಡಿಗ ಪ್ರಶಸ್ತಿ, ಅನುಪಮ, ಶ್ರೀನಾಥ್ ಅವರಿಗೆ ಉದಯೋನ್ಮುಖ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬಳಗದ ಅಧ್ಯಕ್ಷೆ ಭಾರ್ಗವಿ ಹೇಮಂತ್, ಕಾರ್ಯಕ್ರಮ ಪರಿಕಲ್ಪನೆ ರೂಪಿಸಿದ ಮಂಜುನಾಥ ಹಾಲುವಾಗಿಲು, ದಿಲೀಪ್ ಇದ್ದರು. ನೂರೈವತ್ತಕ್ಕೂ ಹೆಚ್ಚು ಮಂದಿಗೆ ‘ಕನ್ನಡ ಕಂಕಣ’ ತೊಡಿಸಿ ನಿರಂತರ ಕನ್ನಡ ಕಲಿಕೆ ಮತ್ತು ಬಳಕೆಯ ಪ್ರತಿಜ್ಞೆ ಬೋಧಿಸಲಾಯಿತು.