ಎಡಿನ್ಬರ್ಗ್:ಸ್ಕಾಟ್ಲೆಂಡ್ ದೇಶದ ರಾಜಧಾನಿ ಎಡಿನ್ಬರ್ಗ್ನಲ್ಲಿ ಕಳೆದ ಶನಿವಾರ (ನವೆಂಬರ್ 13), ಕನ್ನಡ ಅಸೋಸಿಯೇಷನ್ ಆಫ್ ಸ್ಕಾಟ್ಲೆಂಡ್ ಹಾಗೂ ಎಡಿನ್ಬರ್ಗ್ ವತಿಯಿಂದ ಹೊರನಾಡ ಕನ್ನಡಿಗರೆಲ್ಲ ಸೇರಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ಸಂಘಟನೆಯ ಆಶಾ ಭಾರದ್ವಾಜ, ಶಿರೀಶ ಕಾಂತರಾಜ, ಧೀರಜ್ ಮಲ್ಲಪ್ಪ, ಸೌಮ್ಯಾ ಪ್ರಸಾದ್, ಹರೀಶ ನಾಗಪ್ಪ, ಸಿದ್ಧಾರ್ಥ ಕಶ್ಯಪ್, ಪಾವನಾ ನಾಗರಾಜ ಹಾಗು ಶ್ರುತಿ ಅರವಿಂದ ಅವರುಕಾರ್ಯಕ್ರಮ ಉದ್ಘಾಟಿಸಿದರು. ಇತ್ತೀಚೆಗೆ ನಿಧನರಾದ ಕನ್ನಡ ನಟ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡದ ಹಾಡುಗಳು ಹಾಗು ನೃತ್ಯಗಳು ನೆರೆದವರನ್ನು ರಂಜಿಸಿದವು. ನೆರೆದ ಕನ್ನಡಿಗರು ನಮ್ಮ ಪ್ರಾದೇಶಿಕ ಕ್ರೀಡೆಯಾದ ಲಗೋರಿಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಸಂಘದ ಅಧ್ಯಕ್ಷ ರಾಘವೇಂದ್ರ ಕಾಮತ್ ಸ್ವಾಗತಿಸಿದರು.
ಇದೇ ವೇಳೆ ಭರತನಾಟ್ಯದಲ್ಲಿ ಸಾಧನೆ ಮಾಡಿದ ಪ್ರಮೋದಿನಿ ಗೋವಿಂದರಾಜು ಹಾಗೂ ಸ್ಕಾಟ್ಲೆಂಡ್ನಲ್ಲಿ ನೆಲೆಸಿರುವ ಕರ್ನಾಟಕ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಕನ್ನಡ ಕಲಿ ಶಾಲೆಗೆ ಪ್ರತಿವರ್ಷ ಕೊಡಮಾಡುವ ಪ್ರತಿಭಾ ಪುರಸ್ಕಾರವನ್ನು ಸಂಘದ ಚಿದಾನಂದ ರೆಡ್ಡಿ, ರಾಧಾಕೃಷ್ಣ ಗಿನ್ನೆಗೌಡ, ಗಿರೀಶ ಭಾರದ್ವಾಜ ಹಾಗು ವಿಮಲ್ ಡಿಸೋಜಾರವರು ಪ್ರದಾನ ಮಾಡಿದರು.