ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ಸಭೆ ನಿರ್ಣಯ: ಕುಡಿಯುವ ನೀರು, ನೀರಾವರಿಗೆ ₹1,332 ಕೋಟಿ

ಜಲ್‌ ಜೀವನ್‌ ಮಿಷನ್‌ಗೂ ಒತ್ತು
Last Updated 20 ಡಿಸೆಂಬರ್ 2021, 19:46 IST
ಅಕ್ಷರ ಗಾತ್ರ

ಬೆಳಗಾವಿ(ಸುವರ್ಣ ವಿಧಾನಸೌಧ): ವಿವಿಧ ಕುಡಿಯುವ ನೀರಿನ ಯೋಜನೆಗಳು ಮತ್ತು ನೀರಾವರಿ ಯೋಜನೆಗಳಿಗೆ ₹1,332.21 ಕೋಟಿ ಅನುದಾನ ಒದಗಿಸಲು ಸೋಮವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಜಲ್‌ ಜೀವನ್‌ ಮಿಷನ್‌ ಯೋಜನೆಯಡಿ ಹಾವೇರಿ ಜಿಲ್ಲೆಯ ಸವಣೂರು, ಶಿಗ್ಗಾವಿ, ಹಾನಗಲ್‌ ಮತ್ತು ಹಾವೇರಿ ತಾಲ್ಲೂಕಿನ 285 ಗ್ರಾಮಗಳ (291 ಜನವಸತಿಗಳಿಗೆ), ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ₹645 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಆಲಮಟ್ಟಿ ಎಡದಂಡೆ ಕಾಲುವೆ ಕಿ.ಮೀ 0.00 ರಿಂದ 68.24 ವರೆಗಿನ (ಬಾಕಿ ಉಳಿದ) ಕಾಲುವೆ ಜಾಲದ ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಚರ್ ಒಳಗೊಂಡಂತೆ ಆಧುನೀಕರಣ ಕಾಮಗಾರಿಗಳನ್ನು ₹75,41 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಕಾಗಿಣಾ ನದಿಯಿಂದ ನೀರನ್ನೆತ್ತಿ 3,150 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ₹143.80 ಕೋಟಿಗಳ ಯಡ್ಡಳ್ಳಿ ಏತ ನೀರಾವರಿ ಹಾಗೂ ತೆರ್ನಳ್ಳಿ ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಾರಿಗೊಳಿಸುತ್ತಿರುವ ಸುರಪುರ, ಶಹಾಪುರ ಮತ್ತು ತಾವರೆಗೇರಾ ಪಟ್ಟಣಗಳ ಕುಡಿಯುವ ನೀರು ಸರಬರಾಜು ಯೋಜನೆಗಳ ಒಟ್ಟಾರೆ ₹381.87 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ಪ್ರಮುಖ ತೀರ್ಮಾನಗಳು:

* ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹೊಸ ಕಟ್ಟಡ ನಿರ್ಮಾಣಕ್ಕೆ ₹85 ಕೋಟಿ.

* ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಮತ್ತು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗಳ ಹಣಕಾಸಿನ ಸ್ಥಿತಿಗತಿ ಸುಧಾರಣೆಗಾಗಿ ಸಾಲದ ಪುನರ್ ರಚನೆ ಮತ್ತು ರಾಜ್ಯ ಸರ್ಕಾರದಿಂದ ಇವೆರಡೂ ಕಂಪನಿಗಳಿಗೆ ಬಡ್ಡಿ ರಹಿತ ಸಾಲಗಳನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ಒಪ್ಪಿಗೆ.

* ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹೆಚ್ಚುವರಿಯಾಗಿ ₹50 ಕೋಟಿ ಷೇರು ಬಂಡವಾಳ ಬಿಡುಗಡೆಗೆ ಅನುಮತಿ.

* ಕೃತಕ ಬುದ್ಧಿಮತ್ತೆ, ಯಾಂತ್ರೀಕೃತ ಕಲಿಕೆ, ವಿದ್ಯುತ್‌ ಚಾಲಿತ ವಾಹನಗಳು, ವೈದ್ಯ ತಂತ್ರಜ್ಞಾನ ವಲಯಗಳ ನಾವೀನ್ಯತೆ ಮತ್ತು ತೀವ್ರ ತಾಂತ್ರಿಕ ನವೋದ್ಯಮ ಕಂಪನಿಗಳನ್ನು ಬೆಂಬಲಿಸಲು ₹100 ಕೋಟಿ ಬಂಡವಾಳ ನಿಧಿ ಸ್ಥಾಪಿಸಲು ಒಪ್ಪಿಗೆ.

* ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ.

ಕೆಪಿಎಸ್‌ಸಿ ಮಸೂದೆ ಮುಂದಕ್ಕೆ
ಕೆಪಿಎಸ್‌ಸಿ 2011 ನೇ ಬ್ಯಾಚ್‌ನ 362 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ರಕ್ಷಣೆಗಾಗಿ ತಿದ್ದುಪಡಿ ಮಸೂದೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದರೂ, ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಇದನ್ನು ಮುಂದಿನ ಸಂಪುಟ ಸಭೆಯಲ್ಲಿ ಪರಿಶೀಲಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ಕಾನೂನಿನ ಕೆಲವು ಅಂಶಗಳ ಬಗ್ಗೆ ಇನ್ನಷ್ಟು ವಿಸ್ತೃತ ಚರ್ಚೆಯ ಅಗತ್ಯವಿದೆ ಎಂಬ ಸಲಹೆ ಸಭೆಯಲ್ಲಿ ಕೇಳಿ ಬಂದಿತು. ಇದರಿಂದಾಗಿ ಮಸೂದೆಯು ಮುಂದಿನ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಧಾರವಾಡ–ಬೆಳಗಾವಿ ರೈಲು ಮಾರ್ಗಕ್ಕೆ ₹927 ಕೋಟಿ

ಧಾರವಾಡ– ಕಿತ್ತೂರು– ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ₹927.40 ಕೋಟಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

2021–22 ನೇ ಸಾಲಿನ ಐಇಬಿಆರ್‌ ಅಡಿ ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲಗಳ ಮೂಲಕ ₹650 ಕೋಟಿ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ₹250 ಕೋಟಿ, ಕಾವೇರಿ ನೀರಾವರಿ ನಿಗಮಕ್ಕೆ ₹250 ಕೋಟಿ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ₹500 ಕೋಟಿ ಹಣ ಸಂಗ್ರಹಿಸಲು ಮತ್ತು ಸರ್ಕಾರಿ ಖಾತರಿಗೂ ಒಪ್ಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT