ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಸುಳಿಯಲ್ಲಿ ಕರ್ನಾಟಕ

ಕೇಂದ್ರದಿಂದ ಬಾರದ ಜಿಎಸ್‌ಟಿ ಪರಿಹಾರದ ಮೊತ್ತ l ರಾಜ್ಯ ಸರ್ಕಾರದ ಋಣಭಾರ ₹4 ಲಕ್ಷ ಕೋಟಿಗೆ ಏರಿಕೆ?
Last Updated 2 ಸೆಪ್ಟೆಂಬರ್ 2020, 18:29 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ‘ದೇವರ ಆಟ’ದ ಕಾರಣ ಮುಂದು ಮಾಡಿ ಕೊಡಲೇಬೇಕಾಗಿದ್ದ ಜಿಎಸ್‌ಟಿ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಕೊಡದೇ ಕೈ ಎತ್ತಿದ್ದರಿಂದ ಕರ್ನಾಟಕದ ಒಟ್ಟಾರೆ ಸಾಲ ₹4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ.

ಈ ಹಿಂದಿನ ನಾಲ್ಕು ತಿಂಗಳ ಲೆಕ್ಕದಲ್ಲಿ ಕರ್ನಾಟಕಕ್ಕೆ ₹13,764 ಕೋಟಿ ನಷ್ಟ ಪರಿಹಾರ ಹಾಗೂ ಸೆಸ್‌ ರೂಪದಲ್ಲಿ ಸುಮಾರು ₹6,965 ಕೋಟಿ ಬರಬೇಕಿದೆ. ಜಿಎಸ್‌ಟಿ ಕಾಯ್ದೆ ಅನುಸಾರ ಈ ಪರಿಹಾರವನ್ನು ಕೊಡುವುದು ಕೇಂದ್ರದ ಸಂವಿಧಾನಾತ್ಮಕ ಹೊಣೆಗಾರಿಕೆ.

ಅನುದಾನ ಹಂಚಿಕೆ ಬದಲು ಸಾಲ ಮಾಡಿ ಹಣ ಹೊಂದಿಸಿಕೊಳ್ಳಿ ಎಂದಿದ್ದ ಕೇಂದ್ರ ಸರ್ಕಾರ ಇದಕ್ಕಾಗಿ ಎರಡು ದಾರಿ ತೋರಿಸಿದೆ. ಮೊದಲ ದಾರಿಯನ್ನು ಆಯ್ಕೆ ಮಾಡಿಕೊಂಡರೆ ರಾಜ್ಯಕ್ಕೆ ಕೇಂದ್ರವೇ ₹11,324 ಕೋಟಿ ಸಾಲ ಕೊಡಿಸಲಿದೆ ಹಾಗೂ ₹18,036 ಕೋಟಿ ಸಾಲ ಮಾಡಲು ರಾಜ್ಯಕ್ಕೆ ಅವಕಾಶ ಸಿಗಲಿದೆ. ಒಂದೇ ಪಕ್ಷದ ಸರ್ಕಾರ ಎರಡೂ ಕಡೆ ಇರುವುದರಿಂದ ಅನ್ಯಾಯವನ್ನು ಪ್ರತಿಭಟಿಸಲಾಗದ ರಾಜ್ಯ ಸರ್ಕಾರ ಮೊದಲ ದಾರಿಯನ್ನೇ ಆಯ್ಕೆ ಮಾಡಿಕೊಂಡಿದೆ.

ಸದ್ಯ ಕರ್ನಾಟಕದ ಸಾಲ ₹3.27 ಲಕ್ಷ ಕೋಟಿ. ಮುಂದಿನ ಮಾರ್ಚ್‌ ಅಂತ್ಯಕ್ಕೆ ಇದು ₹3.68 ಕೋಟಿ ಆಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಹೇಳಿದ್ದರು. ₹2.37 ಲಕ್ಷ ಕೋಟಿ ಮೊತ್ತದ ಬಜೆಟ್‌ನಲ್ಲಿ ₹1.80 ಲಕ್ಷ ಕೋಟಿ ಆದಾಯ ಸಂಗ್ರಹದ ಲೆಕ್ಕ ಹಾಕಿದ್ದರು. ಖರ್ಚಿಗೆ ಬೇಕಾದ ಹಣಕ್ಕೆ ₹53 ಸಾವಿರ ಕೋಟಿ ಸಾಲ ಪಡೆಯುವುದಾಗಿ ಹೇಳಿದ್ದರು. ಈ ಮೊತ್ತವೂ ಸೇರಿದರೆ ಒಟ್ಟು ಹೊರೆ ₹3.80 ಕೋಟಿಯಷ್ಟಾಗಲಿದೆ.

ಕೊರೊನಾ ಈಗ ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ರಾಜ್ಯದ ನಿರೀಕ್ಷಿತ ಆದಾಯವೂ ಬಂದಿಲ್ಲ, ಕೇಂದ್ರದ ಪರಿಹಾರವೂ ನಿಂತಿದೆ. ಹೀಗಾಗಿ, ಈಗಿನ ಸಾಲದ ಜತೆಗೆ ಕೇಂದ್ರ ಸೂಚಿಸಿರುವಂತೆ ಜಿಎಸ್‌ಟಿ ಪರಿಹಾರದ ನಷ್ಟದ ಮೊತ್ತ ₹11,324 ಕೋಟಿ ಸಾಲ ಮಾಡುವುದು. ಅದರ ಜತೆಗೆ ಜಿಎಸ್‌ಡಿಪಿ ಮೊತ್ತ ₹18 ಲಕ್ಷ ಕೋಟಿಯ ಶೇ 1ರಷ್ಟನ್ನು(₹18 ಸಾವಿರ ಕೋಟಿ) ಸಾಲದ ರೂಪದಲ್ಲಿ ಪಡೆಯುವ ದಾರಿಯನ್ನು ಸರ್ಕಾರ ಆರಿಸಿಕೊಂಡಿದೆ. ಬೊಕ್ಕಸ ಬರಿದಾಗಿದ್ದು, ನೆರೆ ಪರಿಹಾರ–ಅಭಿವೃದ್ಧಿ ಕೆಲಸಗಳು, ನೌಕರರ ವೇತನ, ನಿತ್ಯದ ಖರ್ಚುಗಳಿಗೆ ಸಾಲ ಮಾಡಲೇ ಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಹೀಗಾಗಿ ಹೊಸದಾಗಿ ₹29 ಸಾವಿರ ಕೋಟಿ ಸಾಲ ಮಾಡಿದರೆ ಅಥವಾ ₹11,324 ಕೋಟಿಯ ಜತೆಗೆ, ₹10 ಸಾವಿರ ಕೋಟಿಯಷ್ಟೇ ಸಾಲ ಪಡೆದರೆ ಒಟ್ಟಾರೆ ಋಣಭಾರ ₹4 ಲಕ್ಷ ಕೋಟಿ ದಾಟುವುದಂತೂ ನಿಕ್ಕಿಯಾಗಲಿದೆ.

'ಜಿಎಸ್‌ಟಿ ಸಂಗ್ರಹ ಶೇ 71ರಷ್ಟಾಗಿದೆ ಎಂದು ಸರ್ಕಾರ ಹೇಳಿದೆ. ನಮ್ಮ ತೆರಿಗೆ ಹಣವನ್ನು ನಮಗೆ ನೀಡಲು ನಿರಾಕರಿಸುತ್ತಿರುವುದು ಜನರಿಗೆ ಮಾಡುತ್ತಿರುವ ಮೋಸ ಅಲ್ಲವೇ?' ಎಂದುವಿರೋಧ ಪಕ್ಷದ ನಾಯಕಸಿದ್ದರಾಮಯ್ಯಪ್ರಶ್ನಿಸಿದ್ದಾರೆ.

'ಜಿಎಸ್‌ಟಿ ನಷ್ಟ ಪರಿಹಾರ ತುಂಬಿ ಕೊಡುವ ಬದ್ಧತೆಯಿಂದ ಹಿಂದೆ ಸರಿದ ಕೇಂದ್ರ ಸರ್ಕಾರ, ರಾಜ್ಯಗಳ ಮೇಲೆ ಗದಾಪ್ರಹಾರ ಮಾಡಿದೆ. ಕೇಂದ್ರವೇ ಸಾಲ ಪಡೆದು ರಾಜ್ಯಗಳಿಗೆ ಕೊಡಲಿ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

'ಜಿಎಸ್‌ಟಿ ನಷ್ಟ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಎರಡು ಆಯ್ಕೆಗಳ ಪೈಕಿ ₹ 18,289 ಕೋಟಿ ಪರಿಹಾರ ಪಡೆಯುವ ಮೊದಲ ಆಯ್ಕೆಯನ್ನು ನಮ್ಮ ಸರ್ಕಾರ ಒಪ್ಪಿಕೊಂಡಿದೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT