ಕಾರವಾರ: ಮುಂಗಾರು ಮಾರುತದ ಪರಿಣಾಮ ಜಿಲ್ಲೆಯ ಕರಾವಳಿಯ ವಿವಿಧೆಡೆ ಬುಧವಾರ ಬೆಳಿಗ್ಗೆಯಿಂದ ಆಗಾಗ ಜೋರಾಗಿ ಮಳೆಯಾಗುತ್ತಿದೆ. ಕಾರವಾರದಲ್ಲಿ ಮಧ್ಯಾಹ್ನದವರೆಗೆ ಮೋಡ, ಬಿಸಿಲಿನ ವಾತಾವರಣವಿತ್ತು. ಸಂಜೆ ಮಳೆ ಬೀಳತೊಡಗಿತು.
ಇದೇ ರೀತಿ, ಅಂಕೋಲಾ, ಗೋಕರ್ಣ, ಕುಮಟಾ, ಭಟ್ಕಳದಲ್ಲೂ ಮಳೆಯಾಗಿದೆ. ಮಲೆನಾಡಿನ ತಾಲ್ಲೂಕುಗಳಾದ ಶಿರಸಿ, ಜೊಯಿಡಾ, ಸಿದ್ದಾಪುರ, ದಾಂಡೇಲಿ ಸುತ್ತಮುತ್ತ ತುಂತುರು ಹನಿಗಳು ಬಿದ್ದಿವೆ. ಆಗಾಗ ದಟ್ಟವಾದ ಮೋಡ ಕವಿದ ವಾತಾವರಣವಿತ್ತು.
ಮಂಗಳವಾರ ಬೆಳಿಗ್ಗೆ 8ರಿಂದ ಬುಧವಾರ ಬೆಳಿಗ್ಗೆ 8ರ ಅವಧಿಯಲ್ಲಿ ಕುಮಟಾದಲ್ಲಿ 3.5 ಸೆಂ.ಮೀ, ಕಾರವಾರದಲ್ಲಿ 2.5 ಸೆಂ.ಮೀ, ಹೊನ್ನಾವರದಲ್ಲಿ 1.9 ಸೆಂ.ಮೀ ಹಾಗೂ ಅಂಕೋಲಾದಲ್ಲಿ 1.6 ಸೆಂ.ಮೀ ಮಳೆಯಾಗಿದೆ.
ಮಡಿಕೇರಿ ವರದಿ: ಕೊಡಗು ಜಿಲ್ಲೆಯ ಮಡಿಕೇರಿ, ಕಾಟಕೇರಿ, ಮೇಕೇರಿ, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ
ಶಿವಮೊಗ್ಗ ವರದಿ: ಸಾಗರ ತಾಲ್ಲೂಕು ಕಾರ್ಗಲ್ ಜೋಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಸೊರಬ, ಶಿಕಾರಿಪುರದಲ್ಲಿ ಉತ್ತಮ ಮಳೆಯಾಗಿದೆ. ಕೋಣಂದೂರು, ತೀರ್ಥಹಳ್ಳಿ ಭಾಗದ ಅಲ್ಲಲ್ಲಿ ತುಂತುರು ಮಳೆಯಾಗಿದೆ.
ದಾವಣಗೆರೆ ನಗರ, ಹೊನ್ನಾಳಿ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.ವಿಜಯನಗರ ಜಿಲ್ಲೆಯಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ.