Covid-19 Karnataka Update: 3 ತಿಂಗಳಲ್ಲಿ ಕನಿಷ್ಠ ಮರಣ ಪ್ರಕರಣ

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ 48 ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಮೂರು ತಿಂಗಳ ಅವಧಿಯಲ್ಲಿ ವರದಿಯಾದ ಕನಿಷ್ಠ ಮರಣ ಪ್ರಕರಣಗಳು ಇವಾಗಿವೆ.
ರಾಜ್ಯದಲ್ಲಿ ಏಪ್ರಿಲ್ ಎರಡನೇ ವಾರದ ಬಳಿಕ ಮರಣ ಪ್ರಕರಣಗಳ ಸಂಖ್ಯೆ 50ರ ಗಡಿ ದಾಟಿತ್ತು. ಕಳೆದೊಂದು ತಿಂಗಳಿನಿಂದ ಮರಣ ಪ್ರಕರಣಗಳ ಸಂಖ್ಯೆ ಕೂಡ ಇಳಿಮುಖ ಮಾಡಿದೆ. 17 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ದೃಢಪಟ್ಟಿವೆ. ಮರಣ ಪ್ರಮಾಣ ದರ ಶೇ 2.50ರಷ್ಟು ವರದಿಯಾಗಿದೆ.
ದಕ್ಷಿಣ ಕನ್ನಡದಲ್ಲಿ 9, ಬೆಂಗಳೂರಿನಲ್ಲಿ 8 ಹಾಗೂ ಕೋಲಾರದಲ್ಲಿ 7 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 5ಕ್ಕಿಂತ ಕಡಿಮೆಯಿದೆ. ಈವರೆಗೆ ಕೋವಿಡ್ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 35,944ಕ್ಕೆ ತಲುಪಿದೆ.
ಹೊಸದಾಗಿ 1,913 ಮಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತತ ಒಟ್ಟು ಸಂಖ್ಯೆ 28.74 ಲಕ್ಷ ದಾಟಿದೆ. ಒಂದು ದಿನದಲ್ಲಿ 1.24 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಶೇ 1.53ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ.
ಬೆಂಗಳೂರಿನಲ್ಲಿ 401, ದಕ್ಷಿಣ ಕನ್ನಡದಲ್ಲಿ 222, ಮೈಸೂರಿನಲ್ಲಿ 198, ಹಾಸನದಲ್ಲಿ 191 ಹಾಗೂ ತುಮಕೂರಿನಲ್ಲಿ 170 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 100ರ ಗಡಿಯೊಳಗೆ ವರದಿಯಾಗಿವೆ. 16 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ಹಾಗೂ 8 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ.
ಸೋಂಕಿತರಲ್ಲಿ 2,489 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 28.04 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, 34,234 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ... ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ
ಡೆಲ್ಟಾ ಪ್ಲಸ್: 3ಕ್ಕೆ ಏರಿಕೆ
ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ 60 ವರ್ಷದ ಮಹಿಳೆಗೆ ಈ ತಳಿಯ ವೈರಾಣು ಕಾಣಿಸಿಕೊಂಡಿದೆ. ಅವರ ಗಂಟಲ ದ್ರವದ ಮಾದರಿಯನ್ನು ಒಂದು ತಿಂಗಳ ಹಿಂದೆ ಜಿನೋಮಿಕ್ ಸಿಕ್ವೆನ್ಸೀಸ್ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರು ಮನೆ ಆರೈಕೆಗೆ ಒಳಗಾಗಿ, ಚೇತರಿಸಿಕೊಂಡಿದ್ದಾರೆ. ಇದೇ ಪ್ರದೇಶದಲ್ಲಿ ಈ ಹಿಂದೆ ಒಂದು ಡೆಲ್ಟಾ ಪ್ಲಸ್ ಪ್ರಕರಣ ವರದಿಯಾಗಿತ್ತು. ಇನ್ನೊಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.
ಡೆಲ್ಟಾ ಪ್ಲಸ್ ಮಾತ್ರವಲ್ಲದೇ, ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿರುವ ಹೊಸ ತಳಿಯ ಕೊರೊನಾ ವೈರಾಣುಗಳು ರಾಜ್ಯದಲ್ಲಿ ಈಗಾಗಲೇ ಕೆಲವರಲ್ಲಿ ಕಾಣಿಸಿಕೊಂಡಿದೆ. ಆಲ್ಫಾ/ಬಿ.1.1.7 ವೈರಾಣು ಈವರೆಗೆ 140 ಮಂದಿಯಲ್ಲಿ ಪತ್ತೆಯಾಗಿದೆ. ಅದೇ ರೀತಿ, ಬೀಟಾ/ಬಿ.1.351 ವೈರಾಣು ಆರು ಮಂದಿಯಲ್ಲಿ, ಡೆಲ್ಟಾ/ಬಿ.1.617.2 ವೈರಾಣು 725 ಮಂದಿಯಲ್ಲಿ ಹಾಗೂ ಕಪ್ಪಾ/ಬಿ.1.617.1 ವೈರಾಣು 145 ಮಂದಿಯಲ್ಲಿ ಕಾಣಿಸಿಕೊಂಡಿರುವುದು ಜಿನೋಮಿಕ್ ಸಿಕ್ವೆನ್ಸೀಸ್ ಪರೀಕ್ಷೆಯಿಂದ ದೃಢಪಟ್ಟಿದೆ.
ಇಂದಿನ 13/07/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/yOcKntkn0G @CMofKarnataka @mla_sudhakar @drashwathcn @GovindKarjol @LaxmanSavadi @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/X3nxpNGbJc
— K'taka Health Dept (@DHFWKA) July 13, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.