ಬಸ್ ಟಿಕೆಟ್ ದರ ಹೆಚ್ಚಳವಿಲ್ಲ, ನೌಕರರ ವೇತನ ಏರಿಸುವುದು ಕಷ್ಟ: ಲಕ್ಷ್ಮಣ ಸವದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನಿತ್ಯ ಡೀಸೆಲ್ ವಿಚಾರದಲ್ಲಿ ₹1 ಕೋಟಿ ನಷ್ಟ ಉಂಟಾಗುತ್ತಿದೆ. ಆದರೂ, ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಪ್ರತಿದಿನ ₹3 ಕೋಟಿ ರೂ ಡಿಸೇಲ್ ಬೇಕಾಗಿದೆ. ಆದರೆ ಪ್ರತಿದಿನ ಕೇವಲ ₹2.10 ಕೋಟಿ ರೂ ಮಾತ್ರ ಸಿಗುತ್ತಿದೆ. ಆದರೂ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಲಕ್ಷ್ಮಣ ಸವದಿ ಭರವಸೆ ನೀಡಿದರು.
ಕೋವಿಡ್ ಬಂದ ನಂತರ ಸಾರಿಗೆ ಇಲಾಖೆಗೆ ₹4 ಸಾವಿರ ಕೋಟಿ ನಷ್ಟ ಉಂಟಾಗಿದೆ. ಇಲಾಖೆಯ ನೌಕರರ ವೇತನಕ್ಕಾಗಿ ಪ್ರತಿ ತಿಂಗಳಿಗೆ ₹324 ಕೋಟಿ ಹಣ ಬೇಕು. ಈಗ ನೌಕರರಿಗೆ ಸಂಬಳ ನೀಡುವುದಕ್ಕೂ ನಮಗೆ ಕಷ್ಟವಾಗುತ್ತಿದೆ. ನೌಕರರಿಗೆ ಸಂಬಳ ನಿಲ್ಲಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₹2,484 ಕೋಟಿ ನೀಡಿದ್ದಾರೆ ಎಂದರು.
ಕೋವಿಡ್ 3ನೇ ಅಲೆ ಎದುರಿಸಲು ಪೌಷ್ಟಿಕ ಆಹಾರ ಕಡಿಮೆ ದರಗಳಲ್ಲಿ ನೀಡಿ: ಸಿದ್ದರಾಮಯ್ಯ
ಬೇರೆ ಬೇರೆ ರಾಜ್ಯಗಳಲ್ಲಿ ನೌಕರರಿಗೆ ಶೇಕಡಾ 40ರಷ್ಟು ಸಂಬಳ ಕಡಿತಗೊಳಿಸಿದ್ದಾರೆ. ಆದರೆ ನಮ್ಮಲ್ಲಿ ಆ ರೀತಿ ಮಾಡದೇ ಎಲ್ಲರಿಗೂ ಸಂಬಳವನ್ನು ನೀಡಿದ್ದೇವೆ. ಸರ್ಕಾರಕ್ಕೆ ಬರುತ್ತಿರುವ ಹಣದಿಂದ ನಿಗಮದ ನಿರ್ವಹಣೆಗೆ ಕಷ್ಟ ಇದೆ. ಹಾಗಾಗಿ ಸದ್ಯಕ್ಕೆ ಸಾರಿಗೆ ನೌಕರರ ವೇತನ ಹೆಚ್ಚಳ ಕಷ್ಟ ಎಂದು ಸವದಿ ತಿಳಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂಬುದು ಕೆಲ ಶಾಸಕರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಆದರೆ ಹೈಕಮಾಂಡ್ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಅಲ್ಲ ಎಂದು ಲಕ್ಷ್ಮಣ ಸವದಿ ಹೇಳಿದರು.
ಅಪಘಾತ ಮಾಡು ಎಂದು ಹೇಳುತ್ತಿರಲಿಲ್ಲ: ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಅದಕ್ಕಾಗಿ ಎಫ್ಐಆರ್ನಲ್ಲಿ ಆತನ ಹೆಸರು ಇಲ್ಲ. ಒಂದು ವೇಳೆ ನನ್ನ ಮಗ ಕಾರಿನಲ್ಲಿ ಇದ್ದರೂ ಅಪಘಾತ ಮಾಡು ಅಂತಾ ಹೇಳುತ್ತಿರಲಿಲ್ಲ. ನನ್ನ ಮಗ ತುರ್ತಾಗಿ ಗಾಯಗೊಂಡವರ ನೆರವಿಗೆ ಧಾವಿಸಿದ್ದಾನೆ ಎಂದು ತಿಳಿಸಿದರು.
ಅಪಘಾತವಾದ ಕಾರು ನನ್ನದೇ, ಅದರಲ್ಲಿ ನಾನಿರಲಿಲ್ಲ: ಡಿಸಿಎಂ ಸವದಿ ಪುತ್ರ ಚಿದಾನಂದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.