ಬೆಂಗಳೂರು: ‘ರಾಜ್ಯಕ್ಕೆ ಹೊಸ ದೃಷ್ಟಿಕೋನ ಮತ್ತು ಚೈತನ್ಯ ತುಂಬಬಲ್ಲ ನಾಯಕತ್ವದ ಅಗತ್ಯವಿದೆ. ಬಿ.ವೈ.ವಿಜಯೇಂದ್ರಗೆ ಅಧಿಕಾರ ಹಸ್ತಾಂತರ ಮಾಡುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನ ತಡೆಯಬೇಕು. ಇಲ್ಲವಾದರೆ ಪಕ್ಷ ಮುಂದಿನ ಚುನಾವಣೆಯಲ್ಲಿ ನೆಲಕಚ್ಚಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಸಕರ ಗುಂಪೊಂದು ಪತ್ರ ಬರೆದಿದೆ.
ಸುದೀರ್ಘ ಪತ್ರದಲ್ಲಿ ಜನಸಂಘದ ಕಾಲದಿಂದ ತೀರಾ ಇತ್ತೀಚಿನವರೆಗಿನ ಪಕ್ಷದ ಬೆಳವಣಿಗೆ ಮತ್ತು ವಿದ್ಯಮಾನಗಳನ್ನು ಉಲ್ಲೇಖಿಸಲಾಗಿದೆ. ‘ಲಿಂಗಾಯತ–ವೀರಶೈವ ಸಮುದಾಯದ ಒಲವು ಪಕ್ಷದ ಮೇಲಿದ್ದರೂ ಯಡಿಯೂರಪ್ಪ ಆ ಸಮುದಾಯದ ‘ಪ್ರಶ್ನಾತೀತ’ ನಾಯಕ ಅಲ್ಲ. ಲಿಂಗಾಯತ ಮತ ಬ್ಯಾಂಕಿನ ವಾರಸುದಾರರೂ ಅಲ್ಲ’ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
‘ಯಡಿಯೂರಪ್ಪ ಬಗ್ಗೆ ಅಸಮಾಧಾನಗೊಂಡಿರುವ ಲಿಂಗಾಯತ ಶಾಸಕರ ಗುಂಪೊಂದು ಈ ಪತ್ರವನ್ನು ಬರೆದಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ‘ಅಧಿಕಾರದ ದಂಡ’ವನ್ನು ತಮ್ಮ ಪುತ್ರ ವಿಜಯೇಂದ್ರಗೆ ಹಸ್ತಾಂತರಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ 2023 ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ, ಸಾಮೂಹಿಕ ನಾಯಕತ್ವಕ್ಕೆ ತಿಲಾಂಜಲಿ ನೀಡಿ, ವಂಶಪಾರಂಪರ್ಯದ ಆಡಳಿತಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಇದರ ಪರಿಣಾಮ ಊಹಿಸುವುದೂ ಕಷ್ಟ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಎಚ್.ಎನ್. ಅನಂತಕುಮಾರ್ ಅಂದಿನ ಲೋಕಶಕ್ತಿ ನಾಯಕ ರಾಮಕೃಷ್ಣ ಹೆಗಡೆ ಜತೆ ಚುನಾವಣಾ ಒಪ್ಪಂದ ಮಾಡಿಕೊಂಡರು. ಆಗ ಹೆಗಡೆ ಅವರ ಜತೆಗಿದ್ದ ಲಿಂಗಾಯತ ಸಮುದಾಯ ಬಿಜೆಪಿಯತ್ತ ವಾಲಿತು. ಇದರ ಪರಿಣಾಮ 1998 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿತು. ಬಿಜೆಪಿ 13, ಲೋಕಶಕ್ತಿ ಮತ್ತು ಸಂಯುಕ್ತ ಜನತಾದಳ ತಲಾ 3 ಸ್ಥಾನಗಳನ್ನು ಗೆದ್ದುಕೊಂಡವು. 1999 ರ ವಿಧಾನಸಭಾ ಚುನಾವಣೆಯ ವೇಳೆ ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದರೂ ಗೆಲ್ಲಲು ಸಾಧ್ಯವಾಗಿದ್ದು 44 ಸ್ಥಾನಗಳನ್ನು ಮಾತ್ರ. 1994 ರ ಚುನಾವಣೆಗಿಂತ 4 ಸ್ಥಾನ ಹೆಚ್ಚು ಗೆಲ್ಲಲು ಸಾಧ್ಯವಾಗಿತ್ತು ಎಂದು ಪತ್ರ ಹೇಳಿದೆ.
2012 ರಲ್ಲಿ ಪಕ್ಷವನ್ನು ಒಡೆದು ಯಡಿಯೂರಪ್ಪ ಕೆಜೆಪಿ ಕಟ್ಟಿದರು. ಆಗ ಕೇವಲ 6 ಸ್ಥಾನ (ಶೇಕಡ 9.7 ರಷ್ಟು ಮತ) ಗೆಲ್ಲಲು ಸಾಧ್ಯವಾಯಿತು. ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದರೆ ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಿತ್ತು. ಇದರ ಅರ್ಥ ಇವರ ಪ್ರಭಾವ ಮಧ್ಯ ಕರ್ನಾಟಕದ 3–4 ಜಿಲ್ಲೆಗಳಲ್ಲಿ ಮಾತ್ರ. 2013 ರ ಚುನಾವಣೆಯಲ್ಲಿ ಬಿಜೆಪಿ ಶೇ 20 ರಷ್ಟು ಮತವನ್ನು ಪಡೆದಿತ್ತು. ಒಟ್ಟಿನಲ್ಲಿ ಯಡಿಯೂರಪ್ಪ ‘ಲಿಂಗಾಯತ ಮತ ಬ್ಯಾಂಕಿನ ಸಂರಕ್ಷಕ ಎಂಬುದು ಮಿಥ್ಯೆ’ ಎಂದಿದ್ದಾರೆ.
‘2 ಎ’ ಹೋರಾಟಕ್ಕೂ ನಂಟು!
ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸಬೇಕು ಎಂಬ ಹೋರಾಟ ಕೇವಲ ಮೀಸಲಾತಿ ಹೋರಾಟ ಆಗಿರದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಹೋರಾಟದ ವೇದಿಕೆಯಾಗಿ ರೂಪುಗೊಂಡಿದೆ ಎಂದು ಮೂಲಗಳು ಹೇಳಿವೆ.
ಈ ಹೋರಾಟದ ಮುಂಚೂಣಿಯಲ್ಲಿರುವವರು ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಇಳಿಸುವುದಾಗಿಯೂ, ಪಂಚಮಸಾಲಿ ಸಮುದಾಯದಲ್ಲಿ ಮುಖ್ಯಮಂತ್ರಿಗೆ ಅರ್ಹರಾಗುವ ಸಾಕಷ್ಟು ಶಾಸಕರು ಇದ್ದಾರೆ ಎಂದು ನೇರವಾಗಿಯೂ ಹೇಳಿದ್ದಾರೆ.
ಪಾದಯಾತ್ರೆಯ ಹಲವು ವೇದಿಕೆಗಳಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿಗೆ ಬರೆದರೆನ್ನಲಾದ ಪತ್ರಕ್ಕೂ ಈ ಹೋರಾಟಕ್ಕೂ ಸಂಬಂಧವನ್ನು ಕಲ್ಪಿಸುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹಬ್ಬಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.