ಬೆಂಗಳೂರು; ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರು ಬದಲಾವಣೆ ಮಾಡಿರುವುದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರು ಬದಲಾವಣೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಇದಕ್ಕೆ ತಕ್ಷಣ ತನ್ನ ವಿರೋಧ ವ್ಯಕ್ತಪಡಿಸಬೇಕು ಮತ್ತು ಕೇರಳ ಸಿಎಂ ಜೊತೆ ಮಾತನಾಡಿ ಇಂಥ ಕನ್ನಡ ವಿರೋಧಿ ಕೆಲಸವನ್ನು ತಡೆಯಬೇಕು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಯಾವ ಊರುಗಳ ಹೆಸರು ಬದಲಾವಣೆ? ಮಧೂರ-ಮಧೂರಂ, ಮಲ್ಲ-ಮಲ್ಲಂ, ಕಾರಡ್ಕ-ಕಾಡಗಂ, ಬೇಡಡ್ಕ-ಬೇಡಗಂ, ಕುಂಬಳೆ-ಕುಂಬ್ಲಾ, ಪಿಲಿಕುಂಜೆ-ಪಿಲಿಕುನ್ನು, ಆನೆಬಾಗಿಲು-ಆನವಾದುಕ್ಕಲ್, ಹೊಸದುರ್ಗ-ಪುದಿಯಕೋಟ, ಸಸಿಹಿತ್ಲು-ತೈವಳಪ್ಪು, ಮಹಾಸತಿಗುಂಡಿ-ಮಾಸ್ತಿಕುಂಡು ಎಂದು ಹೆಸರು ಬದಲಾವಣೆ ಆಗಿವೆ.
ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರು ಬದಲಾವಣೆ... ಮಾನ್ಯ ಮುಖ್ಯಮಂತ್ರಿ @BSYBJP ಅವರೇ, ಕರ್ನಾಟಕ ಸರ್ಕಾರ ಇದಕ್ಕೆ ತಕ್ಷಣ ತನ್ನ ವಿರೋಧ ವ್ಯಕ್ತಪಡಿಸಬೇಕು ಮತ್ತು ಕೇರಳ ಸಿಎಂ ಜೊತೆ ಮಾತನಾಡಿ ಇಂಥ ಕನ್ನಡ ವಿರೋಧಿ ಕೆಲಸವನ್ನು ತಡೆಯಬೇಕು. pic.twitter.com/THzAPjLmzr
ಅಲ್ಲದೆ, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.