ಮೈಸೂರು: ಸಾಮೂಹಿಕ ಅತ್ಯಾಚಾರ ನಡೆದ ಸ್ಥಳದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳಿಗೆ ಪೊಲೀಸರು ತಡಬಡಾಯಿಸಿದರು.
ಘಟನೆ ನಡೆಯುವುದಕ್ಕೂ ಮುನ್ನ ಎಷ್ಟು ದಿನ ಈ ಸ್ಥಳಕ್ಕೆ ಬಂದಿದ್ದೀರಿ ಎಂದು ಆಲನಹಳ್ಳಿ ಠಾಣೆ ಇನ್ ಸ್ಪೆಕ್ಟರ್ ರವಿಶಂಕರ್ ಅವರನ್ನು ತರಟೆಗೆ ತೆಗೆದುಕೊಂಡರು
ಸೆರೆ ಸಿಕ್ಕವರು ಹ್ಯಾಬಿಚ್ಯುಯಲ್ ಅಫೆಂಡರ್ಸ್ ಇದ್ದರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ರವಿಶಂಕರ್ ಪರದಾಡಿದರು. ಅಬುಚ್ಯುಯಲ್ ಅಫೆಂಡರ್ಸ್ ಎಂದರೆ ಪದೆ ಪದೇ ಅಪರಾಧ ಕೃತ್ಯ ಎಸಗುವವರು ಎಂದರ್ಥ. ಈ ಜಾಗದಲ್ಲಿ ಸಮರ್ಪಕವಾದ ಗಸ್ತು ನಡೆದಿದ್ದರೆ ಈ ಬಗೆಯ ಅಪರಾಧ ನಡೆಯುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲ ಮುಗಿದ ಮೇಲೆ ಗರುಡಾ ವಾಹನ ಓಡಾಡಿದರೆ ಏನು ಪ್ರಯೋಜನ. ಮೊದಲೇ ಈ ಕಾರ್ಯ ಮಾಡಬೇಕಿತ್ತಲ್ಲವೆ ಎಂದು ಪ್ರಶ್ನಿಸಿದರು.
ಈ ಜಾಗದಿಂದ ರಿಂಗ್ ರಸ್ತೆ ಎಷ್ಟು ದೂರವಾಗುತ್ತದೆ ಎಂದು ಕೇಳಿದ ಪ್ರಶ್ನೆಗೂ ರವಿಶಂಕರ್ ಸರಿಯಾಗಿ ಉತ್ತರಿಸಲಿಲ್ಲ. ಆಗ ಕೋಪಗೊಂಡ ಸಿದ್ದರಾಮಯ್ಯ ಒಂದು ವೇಳೆ ನ್ಯಾಯಾಲಯದಲ್ಲಿ ಕೇಳಿದರೆ ಏನು ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿ ಪ್ರಶ್ನೆಗೂ ರವಿಶಂಕರ್ ಅವರು ಡಿಸಿಪಿ ಪ್ರದೀಪ್ ಗುಂಟಿ ಅವರ ಮುಖ ನೋಡುತ್ತಿರುವುದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಾಮೂಹಿಕ ಅತ್ಯಾಚಾರ ಪ್ರಕರಣ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಷಯ ಗೊತ್ತಾದರೂ ಪ್ರಕರಣ ದಾಖಲಿಸಲು ಪೊಲೀಸರು15 ಗಂಟೆ ವಿಳಂಬ ಮಾಡಿದ್ದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಂತ್ರಸ್ತೆಯ ಹೇಳಿಕೆ ಪಡೆಯದೇ ಇದ್ದದ್ದನ್ನು ನೋಡಿದರೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದೆ ಎಂದು ಅವರು ಕಿಡಿಕಾರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.