ಮೈಸೂರು: ‘ಗ್ರಾಮ ಪಂಚಾಯಿತಿ ಚುನಾವಣೆಯು ಪಕ್ಷಗಳ ಬ್ಯಾನರ್ನಡಿ ನಡೆಯುವುದಿಲ್ಲ.ಹೀಗಾಗಿ,ನಾನು ಈ ಚುನಾವಣೆಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ, ಉಸ್ತುವಾರಿಯನ್ನೂ ವಹಿಸಿಕೊಳ್ಳುವುದಿಲ್ಲ’ ಎಂದು ಜೆಡಿಎಸ್ ಶಾಸಕಜಿ.ಟಿ.ದೇವೇಗೌಡ ಭಾನುವಾರ ಇಲ್ಲಿ ಹೇಳಿದರು.
‘ಚುನಾವಣೆ ಸಂಬಂಧ ಜೆಡಿಎಸ್ ಪೂರ್ವಭಾವಿ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ಕರೆದರೂ ಹೋಗುವುದಿಲ್ಲ’ ಎಂದು ತಿಳಿಸಿದರು.
ಪಂಚಾಯಿತಿ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಬದಲು ಹುಣಸೂರಿನ ಉಸ್ತುವಾರಿ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿ, ‘ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಚಾಮುಂಡೇಶ್ವರಿ ಅಥವಾ ಹುಣಸೂರು ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುವುದಿಲ್ಲ’ ಎಂದರು.
ಈ ನಡುವೆ, ಶಾಸಕ ಸಾ.ರಾ.ಮಹೇಶ್ ಅವರು ಭಾನುವಾರ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜಿ.ಟಿ.ದೇವೇಗೌಡ ಅವರು ಜೆಡಿಎಸ್ನಿಂದ ಅಂತರ ಕಾಯ್ದುಕೊಂಡ ಬಳಿಕ ಇವರು ಭೇಟಿಯಾಗಿದ್ದು ಇದೇ ಮೊದಲು.