ಪ್ರಜಾಕೀಯ ಟಿಕೆಟ್ಗಾಗಿ ಬಸ್ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ ವ್ಯಕ್ತಿ

ಬೀರೂರು: ಇಲ್ಲಿಂದ ಚಿಕ್ಕಮಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಶನಿವಾರ ವಿಭಿನ್ನ ಅನುಭವ ಕಾದಿತ್ತು. ಸಾಮಾನ್ಯವಾಗಿ ಬಸ್ಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಬರುವವರು ಕಾಣಿಸುತ್ತಾರೆ. ಆದರೆ, ಬಸ್ನಲ್ಲಿದ್ದ ವ್ಯಕ್ತಿ, ‘ನಾನು ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಆಗ ಬಯಸಿದ್ದೇನೆ. ಈ ಕರಪತ್ರ ಓದಿ, ಪುಸ್ತಕದಲ್ಲಿ ನಿಮ್ಮ ಸಹಿ ಹಾಕಿ ಮೊಬೈಲ್ ಸಂಖ್ಯೆ ನಮೂದಿಸಿ. ಹೆಚ್ಚು ಜನರ ಸಹಿ ಮತ್ತು ಅಭಿಪ್ರಾಯ ಸಂಗ್ರಹಿಸಿದರೆ ನಮ್ಮ ಪಕ್ಷದಿಂದ ನನಗೆ ಟಿಕೆಟ್ ಸಿಗುತ್ತದೆ’ ಎನ್ನುವ ಬೇಡಿಕೆ ಇರಿಸಿದಾಗ, ಪ್ರಯಾಣಿಕರು ಕ್ಷಣಕಾಲ ಅಚ್ಚರಿಗೊಂಡರು.
ಹೀಗೆ ಮನವಿ ಮಾಡಿ ಬಸ್ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿದವರು ಕಡೂರು ತಾಲ್ಲೂಕು ಗಡುಗನಹಳ್ಳಿಯ ಜಿ.ಟಿ.ಲೋಹಿತ್. ‘ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಸಿದ್ಧಾಂತವನ್ನು ಮೆಚ್ಚಿ, ಆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ಯುವಜನರಿಗೆ ಮತ್ತು ಹೊಸಮುಖಗಳು ಹಾಗೂ ಹೊಸಪಕ್ಷಕ್ಕೆ ಅವಕಾಶ ನೀಡುವ ಸಲುವಾಗಿ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಪ್ರಜಾಕೀಯ ಪಕ್ಷವನ್ನು ನೀವೆಲ್ಲ ಬೆಂಬಲಿಸಿ‘ ಎಂದು ಕೋರಿದರು.
‘ಒಮ್ಮೆ ಶಾಸಕನಾಗಿ ಆಯ್ಕೆ ಆದರೆ ಬದುಕಿರುವವರೆಗೂ ಪ್ರತಿ ತಿಂಗಳೂ ಪಿಂಚಣಿ ಲಭಿಸುತ್ತದೆ. ಆದರೆ, ಗೆದ್ದವರು ಜನಸೇವಕರಾಗುವುದಿಲ್ಲ, ಜನ ನಾಯಕರಾಗುತ್ತಾರೆ. ನಾವು ಆಯ್ಕೆ ಮಾಡುವುದು ನಾಯಕರಾಗಲು ಅಲ್ಲ, ಜನರ ತೆರಿಗೆ ಹಣವನ್ನು ಸದ್ಬಳಕೆ ಮಾಡಿ ಅವರ ಆಶೋತ್ತರಗಳನ್ನು ಈಡೇರಿಸಲು. ಆದರೆ, ಇಂದು ಯಾವುದೇ ಶಾಸಕರು ಉತ್ತರದಾಯಿತ್ವ ತೋರ್ಪಡಿಸುವುದಿಲ್ಲ. ಕೇವಲ ಸ್ವಹಿತಕ್ಕಾಗಿ ರಾಜಕಾರಣವನ್ನು ವೃತ್ತಿಯಾಗಿಸಿಕೊಂಡಿದ್ದಾರೆ’ ಎಂದರು.
ಬಸ್ನಲ್ಲಿದ್ದ ಪ್ರಯಾಣಿಕರು ಪುಸ್ತಕದಲ್ಲಿ ಸಹಿ ಹಾಕಿ ಶುಭ ಕೋರಿದರು.
ಇವುಗಳನ್ನೂ ಓದಿ
‘ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು’
ಪತ್ರ | ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ– ನಾನು ಎಂದೆಂದೂ ಉಪೇಂದ್ರ
‘ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ’ -ಉಪ್ಪಿ ಟ್ವೀಟ್ಗೆ ಆಕ್ರೋಶ
ಲೋಕಸಭಾ ಚುನಾವಣೆ: 28 ಕ್ಷೇತ್ರಗಳಲ್ಲೂ ನಟ ಉಪೇಂದ್ರ ನೇತೃತ್ವದ ಪಕ್ಷ ಕಣಕ್ಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.