ಬೆಂಗಳೂರು: ‘ಶಾಂತಲಾ ಅವರು ರಚಿಸಿರುವ ಕವನಗಳು ಮನ ಮಿಡಿಯುವಂತಿವೆ. ಓದುಗರ ಭಾವನೆಗಳನ್ನು ಮೀಟುವಂತಿವೆ’ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್ ಅಭಿಪ್ರಾಯಪಟ್ಟರು.
ಸ್ನೇಹ ಕೃಪಾ ಮೂವೀಸ್ ಆಯೋಜಿಸಿದ್ದ ಶಾಂತಲಾ ಪಾಟೀಲ್ ಅವರ ‘ಪ್ರೇಮ ತರಂಗ’ ಕವನ ಸಂಕಲನ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.
‘ಶಾಂತಲಾ ಅವರ ಬರಹಗಳಲ್ಲಿ ಹೊಸತನವಿದೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು.
ನಾಟಕಕಾರ ಸುಧಾಕರ ಬನ್ನಂಜೆ, ‘ಬರಹಕ್ಕೆ ಅಪಾರ ಶಕ್ತಿ ಇದೆ. ಒಂದು ಲೇಖನ ಸಮಾಜವನ್ನೇ ಬದಲಾವಣೆ ಮಾಡಿದ ಉದಾಹರಣೆ ಇದೆ. ಡಿಜಿಟಲ್ ಮಾಧ್ಯಮ ಬಂದರೂ ಪುಸ್ತಕಗಳ ಬೇಡಿಕೆ ಕಡಿಮೆಯಾಗುವುದಿಲ್ಲ’ ಎಂದು ತಿಳಿಸಿದರು.